ಮಥುರಾ: ಭ್ರಷ್ಟಾಚಾರದ ಹೆಸರಿನಲ್ಲಿ ಹರಡಿರುವ ಕೊಳಕನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕಾಕ್ರೋಚ್ ಜನತಾ ಪಾರ್ಟಿ ಮಾಡುತ್ತಿದೆ ಎಂದು ವೈಷ್ಣವ ಕಿನ್ನಾರಾ ಅಖಾಡದ ಮುಖ್ಯಸ್ಥೆ ಹಿಮಾಂಗಿ ಸಖಿ ಹೇಳಿದ್ದಾರೆ. ಆ ಮೂಲಕ ಅಭಿಜೀತ್ ದಿಪ್ಕೆ ಅವರ ಆನ್ಲೈನ್ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಪುರುಷೋತ್ತಮ ಮಾಸದ ಅಂಗವಾಗಿ ಠಾಕೂರ್ ಬಂಕೆ ಬಿಹಾರಿ ಅವರ ಆಶೀರ್ವಾದ ಪಡೆಯಲು ಮಂಗಳವಾರ ಬೃಂದಾವನಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 'ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯಾರೂ ಹೆದರಬಾರದು' ಎಂದು ಹೇಳಿದ್ದಾರೆ.
'ದೇಶದ ಯುವಜನರು 'ಕಾಕ್ರೋಚ್ ಜನತಾ ಪಾರ್ಟಿ'ಯನ್ನು ರಚಿಸಿದ್ದಾರೆ. ಭ್ರಷ್ಟಾಚಾರದ ಹೆಸರಿನಲ್ಲಿ ಹರಡಿರುವ ಕೊಳಕನ್ನು ಬಯಲಿಗೆಳೆಯುವುದು ಇದರ ಉದ್ದೇಶವಾಗಿದೆ. ಇದು ಕನ್ನಡಿ ಹಿಡಿಯುವ ಕೆಲಸ ಮಾಡುತ್ತಿರುವಾಗ, ಕನ್ನಡಿ ಕಂಡರೆ ಯಾರು ತಾನೇ ಏಕೆ ಹೆದರಬೇಕು? ಕಳ್ಳತನ ಮಾಡಿದವರಿಗೆ ಮಾತ್ರ ಭಯ ಕಾಡುತ್ತದೆ. ಪ್ರಾಮಾಣಿಕರಾದವರು ಯಾವುದಕ್ಕೂ ಹೆದರಬೇಕಾಗಿಲ್ಲ' ಎಂದು ಅವರು ತಿಳಿಸಿದ್ದಾರೆ.
'ನಾನು ಸ್ವತಃ ಕಾಕ್ರೋಚ್ ಪಾರ್ಟಿಯ ಜೊತೆಗೆ ನಿಲ್ಲುತ್ತೇನೆ. ಕಾಕ್ರೋಚ್ ಜನತಾ ಪಾರ್ಟಿಗೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ಈ ಪಕ್ಷವು ಅತ್ಯಂತ ಅಲ್ಪಾವಧಿಯಲ್ಲಿ ಜಾಗತಿಕ ಮನ್ನಣೆಯನ್ನು ಗಳಿಸಿದೆ' ಎಂದು ಹೇಳಿದ್ದಾರೆ.

