ಅಹಮದಾಬಾದ್: ಕಳೆದ ವರ್ಷ ನಡೆದ ಏರ್ ಇಂಡಿಯಾದ ವಿಮಾನ ದುರಂತದಲ್ಲಿ ತೀವ್ರವಾಗಿ ಹಾನಿಗೊಳಗಾಗಿದ್ದ ಬಿ. ಜೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಸಂಕೀರ್ಣವನ್ನು ಪುನರ್ನಿರ್ಮಿಸಲಾಗುವುದು ಎಂದು ಗುಜರಾತ್ ಸರ್ಕಾರ ಮಂಗಳವಾರ ತಿಳಿಸಿದೆ. ಆದರೆ ಆ ಸ್ಥಳವನ್ನು ಸ್ಮಾರಕವಾಗಿ ಸಂರಕ್ಷಿಸಬೇಕೆಂದು ಸಂತ್ರಸ್ತರ ಕುಟುಂಬಗಳು ಒತ್ತಾಯಿಸಿವೆ.
ಅದೇ ಸ್ಥಳದಲ್ಲಿ ಸರ್ಕಾರ, ₹105 ಕೋಟಿ ಅಂದಾಜು ವೆಚ್ಚದಲ್ಲಿ ಹೊಸ, ಅತ್ಯಾಧುನಿಕ ಹಾಸ್ಟೆಲ್ ಸೌಲಭ್ಯ ನಿರ್ಮಿಸಲಿದೆ ಎಂದು ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ ತಿಳಿಸಿದ್ದಾರೆ.
2025ರ ಜೂನ್ 12ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಂI -171 ಟೇಕ್ -ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರ ಪ್ರದೇಶದ ವೈದ್ಯಕೀಯ ಹಾಸ್ಟೆಲ್ ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಘಟನೆಯಲ್ಲಿ ವಿಮಾನದಲ್ಲಿದ್ದ 241 ಜನ ಮತ್ತು ಹಾಸ್ಟೆಲ್ನಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕ ಬದುಕುಳಿದ್ದರು.
ಸಂತ್ರಸ್ತರ ಕುಟುಂಬಸ್ಥರು ಈ ಸ್ಥಳವನ್ನು ಸ್ಮಾರಣಾರ್ಥ ಸ್ಥಳವಾಗಿ ಸಂರಕ್ಷಿಸಬೇಕು ಎಂದು ಹೇಳಿರುವುದಾಗಿ 115 ಸಂತ್ರಸ್ತರನ್ನು ಪ್ರತಿನಿಧಿಸುವ ಸಂಸ್ಥೆಯು ಅಧಿಕಾರಿಗಳಿಗೆ ಕಳುಹಿಸಲಾದ ಇಮೇಲ್ಗಳಲ್ಲಿ ಉಲ್ಲೇಖಿಸಿದೆ.
ನಮಗೆ, ಈ ಸ್ಥಳವು ಕೇವಲ ಭೂಮಿ ಅಥವಾ ಮೂಲಸೌಕರ್ಯವಲ್ಲ. ಇದು ಮಡಿದ ಜೀವಗಳ ನೆನಪುಗಳು ಮತ್ತು ಎಂದಿಗೂ ಭರಿಸಲಾರದ ನಷ್ಟಕ್ಕೆ ಸಂಬಂಧಿಸಿದ ತಾಣವಾಗಿದೆ. ಇಲ್ಲಿ ಸ್ಮಾರಕ ನಿರ್ಮಿಸುವುದರಿಂದ ಕುಟುಂಬಗಳಿಗೆ ಸ್ಮರಣಾರ್ಥ ಸ್ಥಳವಾಗಿ ಮಾತ್ರವಲ್ಲದೆ, ಪ್ರಾಣ ಕಳೆದುಕೊಂಡ ಜೀವಗಳಿಗೆ ಸಾರ್ವಜನಿಕವಾಗಿ ಗೌರವ ಸಲ್ಲಿಸಿದಂತಾಗುತ್ತದೆ. ಅಲ್ಲದೇ ಹೊಣೆಗಾರಿಕೆ ಹಾಗೂ ಸುರಕ್ಷತೆಯ ಪ್ರಾಮುಖ್ಯತೆಯನ್ನು ಇದು ಸದಾ ನೆನಪಿಸುತ್ತದೆ ಎಂದೂ ಇಮೇಲ್ ಒಂದರಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರ್ಕಾರ, ತಮ್ಮನ್ನು ಸಂಪರ್ಕಿಸಬೇಕು ಎಂದೂ ಸಂತ್ರಸ್ತರ ಸಂಬಂಧಿಕರು ಮನವಿ ಮಾಡಿದ್ದಾರೆ.

