ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಕೀಯ ಹಗ್ಗ ಜಗ್ಗಾಟಕ್ಕೆ ಅಂತಿಮವಾಗಿ ತೆರೆ ಬಿದ್ದಿದ್ದು ವಿಧಾನಸಭೆಯನ್ನು ಗುರುವಾರ ವಿಸರ್ಜಿಸಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲು ಮಮತಾ ಬ್ಯಾನರ್ಜಿ ನಿರಾಕರಿಸಿದ ಬೆನ್ನಲ್ಲೇ, ರಾಜ್ಯಪಾಲ ಆರ್.ಎನ್.ರವಿ ಇಂದು ಸಂಜೆ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
ರಾಜಭವನದಿಂದ ಅಧಿಕೃತ ಆದೇಶ...
ವಿಧಾನಸಭೆ ಅವಧಿಯು ನಿನ್ನೆ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ, ರಾಜಭವನ ಮೊನ್ನೆ ಹೊರಡಿಸಿದ್ದ ಪತ್ರವನ್ನು ನಿನ್ನೆ ಸಂಜೆ ಅಧಿಕೃತವಾಗಿ ಪ್ರಕಟಿಸಿದೆ. ಸಂವಿಧಾನದ 174ನೇ ವಿಧಿ ಅನ್ವಯ ತಮಗೆ ನೀಡಿರುವ ಅಧಿಕಾರವನ್ನು ಬಳಸಿ ರಾಜ್ಯಪಾಲರು ಮೇ 7ರಿಂದ ಜಾರಿಗೆ ಬರುವಂತೆ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.
ಮಮತಾ ಬ್ಯಾನರ್ಜಿ ನಿಲುವು: ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾದ ನಂತರವೂ, ಮಮತಾ ಬ್ಯಾನರ್ಜಿ ರಾಜಿನಾಮೆ ನೀಡಲು ನಿರಾಕರಿಸಿ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ನಾನು ಚುನಾವಣೆಯಲ್ಲಿ ಸೋತಿಲ್ಲ, ಆದ್ದರಿಂದ ರಾಜಭವನಕ್ಕೆ ಹೋಗುವುದಿಲ್ಲ ಮತ್ತು ರಾಜಿನಾಮೆ ಸಲ್ಲಿಸುವುದಿಲ್ಲ. ಬಿಜೆಪಿಗೆ ಸಿಕ್ಕಿರುವ ಬಹುಮತ ಜನರದ್ದಲ್ಲ, ಅದು ಮತಗಳ ಲೂಟಿ ಎಂದು ಆರೋಪಿಸಿದ್ದರು.
ಮಮತಾ ಬ್ಯಾನರ್ಜಿ ನಡೆಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಚುನಾವಣೆಯಲ್ಲಿ ಸೋತ ನಂತರವೂ ಅಧಿಕಾರದಲ್ಲಿ ಮುಂದುವರಿಯಲು ಯತ್ನಿಸುತ್ತಿರುವ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದರು.
ಈಗ ವಿಧಾನಸಭೆ ವಿಸರ್ಜನೆಗೊಂಡಿರುವುದರಿಂದ ಮಮತಾ ಬ್ಯಾನರ್ಜಿ ಅವರ ಅಧಿಕಾರವದಿ ಅಧಿಕೃತವಾಗಿ ಅಂತ್ಯಗೊಂಡು ಬಂಗಾಳವು ಮುಂದಿನ ಆಡಳಿತಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.

