ಹೈದರಾಬಾದ್: ತಾನು ಆರಂಭಿಸಿದ ರಾಜಕೀಯ ಪಕ್ಷಕ್ಕೆ ಪ್ರಚಾರ ಸಿಗಬೇಕು ಎಂಬ ದೃಷ್ಟಿಯಿಂದ ದಾರಾ ಅಭಿನಯ್ ದರ್ಶನ್ ಎಂಬ ಪಾದ್ರಿಯು ತನ್ನ ಮೇಲೆ ಬುಡಕಟ್ಟು ಜನರು ವಾಸಿಸುವ ಪ್ರದೇಶದ ಜನರಿಂದ ದಾಳಿ ಮಾಡಿಸಿಕೊಂಡು, ದಾಳಿಯ ದೃಶ್ಯಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
38 ವರ್ಷ ದರ್ಶನ್ ಅವರು ಕಡಪಾ ಪ್ರದೇಶಕ್ಕೆ ಸೇರಿದವರು. ಇವರು ಇದೇ ಮಾರ್ಚ್ 26ರಂದು 'ಭರೋಸಾ ಪಾರ್ಟಿ' ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಇವರು ಹಾಗೂ ಇವರ ಸ್ನೇಹಿತರು ಸೇರಿಕೊಂಡು ದಾಳಿಯ ನಾಟಕ ರೂಪಿಸಿದ್ದರು. ದರ್ಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ತಾನು ವಾಹನದಲ್ಲಿ ಹೋಗುವಾಗ ತನ್ನ ಮೇಲೆ ದಾಳಿ ಮಾಡುವಂತೆ ದರ್ಶನ್ ಯೋಜನೆ ರೂಪಿಸಿದ್ದರು. ಇದಕ್ಕಾಗಿ ದುಂಬ್ರಿಗುಡ ಮತ್ತು ಸುತ್ತಮುತ್ತಲ ಪ್ರದೇಶದ ಜನರಿಗೆ ಹಣ ನೀಡಿದ್ದರು. ತನ್ನ ಮೇಲೆ ದಾಳಿ ಮಾಡಿಸಿಕೊಂಡು ಕೋಮುಸೌಹಾರ್ದಕ್ಕೆ ಭಂಗ ತಂದು, ಜನರಲ್ಲಿ ಆತಂಕ ಸೃಷ್ಟಿಸುವ ಉದ್ದೇಶ ದರ್ಶನ್ ಅವರಿಗೆ ಇತ್ತು' ಎಂದು ಪೊಲೀಸರು ಹೇಳಿದ್ದಾರೆ.

