ಇಂಫಾಲ: ಶಂಕಿತ ಕುಕಿ ಬಂಡುಕೋರರ ಒತ್ತೆಯಾಳಗಿರುವ 6 ಮಂದಿ ಪುರುಷರ ಬಿಡುಗಡೆಗೆ ಆಗ್ರಹಿಸಿ ನಾಗಾ ಸಮುದಾಯದ ಸಾವಿರಾರು ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿದರು.
ಸೇನಾಪತಿ ಜಿಲ್ಲಾಕೇಂದ್ರಗಳಲ್ಲಿ ಮಾರುಕಟ್ಟೆಗಳು ಮುಚ್ಚಿದ್ದರಿಂದ ಮತ್ತು ವಾಣಿಜ್ಯ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನಕಾರರು ಘೋಷಣೆ ಕೂಗಿದರು. 'ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ, ಕುಕಿ ಬಂಡುಕೋರರೇ ಅಪಹರಣವನ್ನು ನಿಲ್ಲಿಸಿ' ಎಂಬ ಘೋಷಣೆಗಳಿದ್ದ ಭಿತ್ತಿಫಲಕಗಳನ್ನು ಪ್ರದರ್ಶಿಸಿದರು.
'ನಮಗೆ ನ್ಯಾಯ ನೀಡಬೇಕು ಮತ್ತು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ಪಷ್ಟ ಸಂದೇಶವನ್ನು ನೀಡಲು ಬಯಸುತ್ತೇವೆ' ಎಂದು ನಾಗಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪ್ರಿಸಿಲ್ಲಾ ಥಿಯುಮಯಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಪಹರಣಕ್ಕೀಡಾದವರ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಲು ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ಉಖ್ರುಲ್, ಛಾಂದೆಲ್, ಟೇಮೆಂಗ್ಲಂಗ್ ಮತ್ತು ನಾನಿ ಪ್ರದೇಶಗಳಲ್ಲಿಯೂ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.
ಕಾಂಗ್ಪೋಕ್ಪಿ ಮತ್ತು ಸೇನಾಪತಿ ಜಿಲ್ಲೆಗಳಲ್ಲಿ ಶಸ್ತ್ರಾಸ್ತ್ರ ಸಂಘಟನೆಯೊಂದು ಮೇ 13ರಂದು 38ಕ್ಕೂ ಅಧಿಕ ಮಂದಿಯನ್ನು ಅಪಹರಿಸಿ, ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ಅದರಲ್ಲಿ ಮಹಿಳೆಯರು ಸೇರಿದಂತೆ 31 ಜನರನ್ನು ಬಿಡುಗಡೆ ಮಾಡಲಾಗಿದೆ. ಉಳಿದ ಆರು ಮಂದಿಯನ್ನು ಬಿಡುಗಡೆಗೊಳಿಸಿಲ್ಲ.
'ಸಮುದಾಯದ 14 ಜನರನ್ನು ನಾಗಾ ಸಂಘಟನೆಗಳು ಒತ್ತೆಯಾಳುಗಳಾಗಿ ಇರಿಸಿಕೊಂಡಿವೆ' ಎಂದು ಕುಕಿ ಬುಡಕಟ್ಟು ಸಂಘಟನೆ ಕುಕಿ ಇಂಪಿ ಮಣಿಪುರ ತಿಳಿಸಿದೆ.

