ಕಾಸರಗೋಡು: ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಪಾದಂಗಳವರ ತತ್ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಭಾನುವಾರ ಶ್ರೀಎಡನೀರು ಮಠಕ್ಕೆ ಚಿತ್ತೈಸಿದರು. ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಮಠಕ್ಕೆ ಬರಮಾಡಿಕೊಳ್ಳಲಾಯಿತು. ಪಂಚವಾದ್ಯ, ವಿಪ್ರರಿಂದ ಮಂತ್ರಘೋಷಗಳೊಂದಿಗೆ ಜಗದ್ಗುರುಗಳನ್ನು ಶ್ರೀಮಠಕ್ಕೆ ಕರೆತರಲಾಯಿತು. ಎಡನೀರುಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶ್ರೀಗಳನ್ನು ಹಾರಾರ್ಪಣೆಯೊಂದಿಗೆ ಸ್ವಾಗತಿಸಿದರು. ನಂತರ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಿತು.
11ರಂದು ಬೆಳಗ್ಗೆ 7ಕ್ಕೆ ಶ್ರೀ ರುದ್ರಹವನ, ಶಿ ದಕ್ಷಿಣಾಮೂರ್ತಿ ಹವನ, ಶ್ರೀ ಗೋಪಾಲಕೃಷ್ಣ ಹವನ ನಡೆಯುವುದು. ಈ ಸಂದರ್ಭ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಮಂಟಪದಲ್ಲಿ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಪಂಚಲೋಹದ ಪ್ರತಿಮೆಯನ್ನು ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಪ್ರತಿಷ್ಠಾಪಿಸುವರು. ಶ್ರೀ ಸಚ್ಚಿದಾನಂದಭಾರತೀ ಶ್ರಿ ಪಾದಂಗಳವರು ದಿವ್ಯ ಉಪಸ್ಥಿತರಿರುವರು. ಬೆಳಗ್ಗೆ10.30ಕ್ಕೆ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ಅನುಗ್ರಹ ಭಾಷಣ ನಡೆಯುವುದು.



