ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಮೆರಿಕ ಮತ್ತು ಇಸ್ರೇಲ್ ಮೇಲೆ ಒತ್ತಡ ಹೇರುವಂತೆ ಜಗತ್ತಿನ ದೇಶಗಳನ್ನು ಒತ್ತಾಯಿಸಿದರು. ಯುದ್ಧ ಕೊನೆಗೊಂಡರೆ ಸ್ಥಿರತೆಯು ಮರಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
''ನಮಗೆ ನ್ಯಾಯ ಬೇಕು. 'ಯಾಕೆ' ಎಂಬುದಾಗಿ ಇರಾನನ್ನು ಕೇಳುವ ಬದಲು, ಈ ಯುದ್ಧವನ್ನು ಆರಂಭಿಸಿದವರಿಗೆ ನಿಲ್ಲಿಸುವಂತೆ ಹೇಳಬೇಕು. ಯಾಕೆಂದರೆ ಈ ಸಂಘರ್ಷದಿಂದ ಪ್ರತಿಯೊಬ್ಬರೂ ಸಂಕಷ್ಟಕ್ಕೊಳಗಾಗಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಯುದ್ಧವನ್ನು ನಿಲ್ಲಿಸಿದರೆ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುತ್ತದೆ'' ಎಂದು ಅವರು ಹೇಳಿದರು.
ಇರಾನ್ನೊಂದಿಗಿನ ಅಂತರ್ರಾಷ್ಟ್ರೀಯ ವ್ಯಾಪಾರ ಮತ್ತು ಸಂಬಂಧಗಳ ಮೇಲಿನ ನಿರ್ಬಂಧಗಳನ್ನೂ ಅವರು ಪ್ರಶ್ನಿಸಿದರು. ಈ ನಿರ್ಬಂಧಗಳು ಅಸಮರ್ಥನೀಯ ಮತ್ತು ಸಾಮೂಹಿಕ ಶಿಕ್ಷೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇರಾನ್ ಸಂಘರ್ಷವನ್ನು ಬಯಸಿರಲಿಲ್ಲ ಎಂದು ಹೇಳಿದ ಇಲಾಹಿ, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಪ್ಪಿಸಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾನ್ ಪ್ರಯತ್ನಿಸಿತ್ತು ಎಂದು ತಿಳಿಸಿದರು. ಒಮಾನ್ನಲ್ಲಿ ಮತ್ತು ಬಳಿಕ ಜಿನೀವದಲ್ಲಿ ಮಾತುಕತೆಗಳು ನಡೆದಿದ್ದವು ಎಂದು ಅವರು ಹೇಳಿದರು. ''ಆ ಮಾತುಕತೆಗಳಲ್ಲಿ ಪ್ರಗತಿ ಉಂಟಾಗಿತ್ತು. ಆದರೆ ದಿಢೀರ್ ದಾಳಿಗಳು ನಡೆದು ಮಾತುಕತೆಗಳು ನಿಂತವು. ಇದಕ್ಕೆ ವಿರೋಧಿ ಬಣವೇ ಹೊಣೆಯಾಗಿದೆ'' ಎಂದರು.

