ಕೋಲ್ಕತ್ತ: 'ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಿ ಹಾಕಿರುವುದರಿಂದ ಬಿಜೆಪಿಗೆ ಗೆಲುವಾಗಿದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.
ಆ ಮೂಲಕ ಬಂಗಾಳದಲ್ಲಿ ಚೊಚ್ಚಲ ಬಾರಿಗೆ ಸರ್ಕಾರ ರಚಿಸಿರುವ ಬಿಜೆಪಿಯ ಗೆಲುವಿನ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.
ಸ್ಟ್ಯಾನ್ಫೋರ್ಡ್ ಇಂಡಿಯಾ ಸಮ್ಮೇಳನ'ದಲ್ಲಿ ಬಿಜೆಪಿ ವಿರುದ್ಧ ತೀಕ್ಷ್ಣವಾದ ಪ್ರಶ್ನೆಗಳನ್ನು ಎತ್ತಿರುವ ತರೂರ್, 'ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆಯಲ್ಲಿ (ಎಸ್ಐಆರ್) ಮತದಾರರ ಪಟ್ಟಿಯಿಂದ ಸುಮಾರು 91 ಲಕ್ಷ ಹೆಸರುಗಳನ್ನು ಅಳಿಸಿ ಹಾಕಲಾಗಿತ್ತು' ಎಂದು ಉಲ್ಲೇಖಿಸಿದ್ದಾರೆ.
'ಸುಮಾರು 34 ಲಕ್ಷ ಮಂದಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಮತದಾನದ ವೇಳೆ ಕೆಲವನ್ನು ಮಾತ್ರ ಬಗೆಹರಿಸಲಾಗಿದ್ದು, ಬಹುಪಾಲು ಬಗೆಹರಿಯದೆ ಉಳಿದಿದೆ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿರಬಹುದು' ಎಂದು ಆಪಾದಿಸಿದ್ದಾರೆ.
'ಅಂಕಿಅಂಶಗಳನ್ನು ಗಮನಿಸಿದರೆ ಬಂಗಾಳದಲ್ಲಿ ಬಿಜೆಪಿ 30 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದೆ. ಇದು ಬಾಕಿ ಇರುವ ಮತದಾರರ ಮೇಲ್ಮನವಿಗಳ ಸಂಖ್ಯೆಗೆ ಹೊಂದಿಕೆಯಾಗುತ್ತವೆ. ಈವಾಗ ನೀವೇ ಹೇಳಿ ಇದು ನ್ಯಾಯಯುತವೇ? ಪ್ರಜಾಸತ್ತಾತ್ಮಕವೇ' ಎಂದು ಪ್ರಶ್ನಿಸಿದ್ದಾರೆ.
'ಮತ್ತೊಂದೆಡೆ ಕೇರಳದಲ್ಲಿ ಎಸ್ಐಆರ್ ಪ್ರಕ್ರಿಯೆಯಿಂದ ನಕಲಿ ಮತದಾರರನ್ನು ಅಳಿಸಿ ಹಾಕಿದ್ದರಿಂದ ಕಾಂಗ್ರೆಸ್ಗೆ ನೆರವಾಗಿರಬಹುದು' ಎಂದು ತರೂರ್ ಅಂದಾಜಿಸಿದ್ದಾರೆ.

