ನವದೆಹಲಿ: ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ವಾಪಸ್ ಕೆಳಗಿಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಮೃತರನ್ನು ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಅರೆ ಎಂದು ಗುರುತಿಸಲಾಗಿದೆ. ಇವರಿಬ್ಬರು ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದ್ದರು.
ಆದರೆ, ತುದಿಯಿಂದ ಕೆಳಗೆ ಇಳಿಯುವಾಗ ತೀವ್ರ ಆಯಾಸಕ್ಕೆ ಒಳಗಾಗಿದ್ದರು. ಎಷ್ಟೇ ಪ್ರಯತ್ನಿಸಿದರೂ ಅವರನ್ನು ಉಳಿಸಲು ಸಾಧ್ಯವಾಗಿಲ್ಲ' ಎಂದು ನೇಪಾಳದ 'ಎಕ್ಸ್ಪೆಡಿಶನ್ ಆಪರೇಟರ್ಸ್ ಅಸೋಸಿಯೇಷನ್' ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ಹೇಳಿದ್ದಾರೆ.
ಸಂದೀಪ್ ಅರೆ ಅವರು ಬುಧವಾರ ಮತ್ತು ತಿವಾರಿ ಅವರು ಗುರುವಾರ ಸಂಜೆ 5.30ಕ್ಕೆ ಶಿಖರವನ್ನು ಏರಿದ್ದರು ಎಂದು ಭಂಡಾರಿ ವಿವರಿಸಿದ್ದಾರೆ.
ಸಂದೀಪ್ ಅರೆ ಸೇರಿದಂತೆ ಮೂವರು ಭಾರತೀಯರು 8,848.86 ಮೀಟರ್ ಎತ್ತರದ ಈ ಶಿಖರವನ್ನು ಏರಿದ ಒಟ್ಟು 274 ಪರ್ವತಾರೋಹಿಗಳ ತಂಡದಲ್ಲಿದ್ದರು. ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಜನರು ಶಿಖರವನ್ನು ಏರಿದ ಹೊಸ ದಾಖಲೆಯಾಗಿದೆ. ಉಳಿದ ಇಬ್ಬರು ಭಾರತೀಯರೆಂದರೆ ತುಳಸಿ ರೆಡ್ಡಿ ಪಾಲ್ಪುನೂರಿ ಮತ್ತು ಅಜಯ್ ಪಾಲ್ ಸಿಂಗ್ ಧಲಿವಾಲ್.
ಭಾರತದ ಲಕ್ಷ್ಮೀಕಾಂತ ಮಂಡಲ್ ಅವರೂ ಗುರುವಾರ ವಿಶ್ವದ ಅತಿ ಎತ್ತರದ ಶಿಖರವನ್ನು ತಲುಪಿದ್ದರು.

