ನವದೆಹಲಿ: ಜನರ ರಕ್ಷಣೆ ದೃಷ್ಟಿಯಿಂದ ರೇಬಿಸ್ ಪೀಡಿತ ಮತ್ತು ಆಕ್ರಮಣಕಾರಿ ಬೀದಿನಾಯಿಗಳನ್ನು ದಯಾಮರಣದ ಮೂಲಕ ಕೊಲ್ಲಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅನುಮತಿ ನೀಡುವ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಹೊರಡಿಸಿದೆ.
ಬೀದಿನಾಯಿಗಳ ಸ್ಥಳಾಂತರ ಕುರಿತ ತಮ್ಮ ಹಿಂದಿನ ಆದೇಶ ಮಾರ್ಪಾಡು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತಾದ ತೀರ್ಪಿನ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ಈ ಆದೇಶ ಮಾಡಿದೆ.
ಶಾಸನಬದ್ಧ ಶಿಷ್ಟಾಚಾರಗಳಿಗೆ ಅನುಗುಣವಾಗಿ ಸೂಕ್ತ ಪ್ರಕರಣಗಳಲ್ಲಿ ಈ ಪ್ರಕ್ರಿಯೆ ನಡೆಸಬೇಕೆಂದು ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠವು ನಿರ್ದೇಶನ ನೀಡಿದೆ.
'ಬೀದಿ ನಾಯಿಗಳ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ನಾಯಿ ಕಡಿತ ಅಥವಾ ಆಕ್ರಮಣಕಾರಿ ದಾಳಿಯ ಘಟನೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಬೀದಿ ನಾಯಿಗಳಿಂದ ನಿರಂತರ ಬೆದರಿಕೆ ಇರುವ ಪ್ರದೇಶಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅರ್ಹ ಪಶುವೈದ್ಯರಿಂದ ಸರಿಯಾದ ಮೌಲ್ಯಮಾಪನ ನಡೆಸಿ, ಅನಾರೋಗ್ಯಪೀಡಿತ, ಕ್ರೋಧೋನ್ಮತ್ತ ಅಥವಾ ಅಪಾಯಕಾರಿ, ಆಕ್ರಮಣಕಾರಿ ನಾಯಿಗಳ ವಿರುದ್ಧ ದಯಾಮರಣ ಸೇರಿದಂತೆ ಕಾನೂನು ಅನುಮತಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದು. ಪ್ರಾಣಿಗಳ ಜನನ ನಿಯಂತ್ರಣ ನಿಯಮ ಮತ್ತು ಇತರ ಅನ್ವಯವಾಗುವ ಶಾಸನಬದ್ಧ ಶಿಷ್ಟಾಚಾರಗಳಿಗೆ ಅನುಸಾರವಾಗಿಯೇ ಪ್ರಕ್ರಿಯೆ ನಡೆಸಬೇಕು' ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಉಪಸ್ಥಿತಿಯನ್ನು ಆತಂಕಕಾರಿ ಎಂದು ಪೀಠ ಹೇಳಿದ.
ಬೀದಿ ನಾಯಿಗಳು ಜನರ ಮೇಲೆ, ವಿಶೇಷವಾಗಿ ಮಕ್ಕಳು, ವೃದ್ಧರ ಮೇಲೆ ದಾಳಿ ಮಾಡಿದ ನಿದರ್ಶನಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

