ಕಲ್ಕತ್ತ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಹೈಕೋರ್ಟ್ ಆವರಣದಲ್ಲಿ ಮುಜುಗರದ ಸನ್ನಿವೇಶ ಎದುರಾಗಿದೆ. ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ವಿಚಾರಣೆ ಮುಗಿಸಿ ಹೊರಬರುತ್ತಿದ್ದ ವೇಳೆ, ವಕೀಲರ ಗುಂಪೊಂದು ಅವರ ವಿರುದ್ಧ ಕಳ್ಳ (ಚೋರ್) ಎಂಬ ಘೋಷಣೆಗಳನ್ನು ಕೂಗಿದ್ದರು.
ಇದರಿಂದ ಗುರುವಾರ ಮಧ್ಯಾಹ್ನ ಕೋರ್ಟ್ ಆವರಣದಲ್ಲಿ ಭಾರಿ ಗದ್ದಲ ಉಂಟಾಯಿತು.
ಮಮತಾ ಅವರ ಜೊತೆಯಲ್ಲಿದ್ದ ಟಿಎಂಸಿ ನಾಯಕ ಹಾಗೂ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ, 'ಬಿಜೆಪಿ ಪರ ನಿಲುವು ಹೊಂದಿರುವ ವಕೀಲರು ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಅವರನ್ನು ಸುರಕ್ಷಿತವಾಗಿ ಹೊರತರಲು ನಮ್ಮ ಕಾನೂನು ತಂಡ ಹರಸಾಹಸ ಪಡಬೇಕಾಯಿತು' ಎಂದು ಆರೋಪಿಸಿದ್ದಾರೆ.
'ನ್ಯಾಯಾಲಯವು ಯಾರನ್ನೋ ಬಹಿರಂಗವಾಗಿ ಕಳ್ಳ/ಕಳ್ಳಿ ಅಥವಾ ದರೋಡೆಕೋರ ಎಂದು ಕರೆಯುವ ಜಾಗವಲ್ಲ. ನಮ್ಮ ಎದುರಾಳಿ ಪಕ್ಷದ ನಾಯಕರ ಬಗ್ಗೆ ನಮಗೂ ಇಂತಹ ಮಾತುಗಳನ್ನು ಹೇಳಲು ಬರುತ್ತದೆ. ಅರ್ಜಿಯೊಂದರ ಕುರಿತು ವಾದ ಮಂಡಿಸಲು ಮಾಜಿ ಮುಖ್ಯಮಂತ್ರಿ ನ್ಯಾಯಾಲಯಕ್ಕೆ ಬಂದಿದ್ದರು. ವಿಚಾರಣೆ ಮುಗಿಸಿ ಹೊರಬರುವಾಗ ನಮಗೆ ಅತೀವ ತೊಂದರೆ ನೀಡಲಾಯಿತು. ಮಮತಾ ಬ್ಯಾನರ್ಜಿ ಅವರಿಗೆ ಈ ಪರಿಸ್ಥಿತಿ ಬಂದಿದೆ ಎಂದ ಮೇಲೆ, ಬಂಗಾಳದ ಸಾಮಾನ್ಯ ಟಿಎಂಸಿ ಕಾರ್ಯಕರ್ತರ ಸ್ಥಿತಿ ಹೇಗಿರಬಹುದು ಎಂದು ಊಹಿಸಿ' ಎಂದು ಕಲ್ಯಾಣ್ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಮಾಜಿ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರೊಂದಿಗೆ ಕೋರ್ಟ್ಗೆ ಆಗಮಿಸಿದ್ದ ಮಮತಾ, ಚುನಾವಣೋತ್ತರ ಹಿಂಸಾಚಾರ ಮತ್ತು ಪಕ್ಷದ ಕಚೇರಿಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಾದ ಮಂಡಿಸಿದರು.
2026ರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಪಕ್ಷದ ಕಚೇರಿಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ವಕೀಲ ಶೀರ್ಷಣ್ಯ ಬಂದೋಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಚುನಾವಣೆಯ ನಂತರ ಹಲವು ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರು ಪ್ರಾಣ ಭಯದಿಂದ ಮನೆ ಬಿಟ್ಟು ಓಡಿಹೋಗಿದ್ದಾರೆ. ತೃಣಮೂಲ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದಕ್ಕಾಗಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಮೇ 12ರಂದು ಸಲ್ಲಿಸಲಾಗಿದ್ದ ಈ ಅರ್ಜಿಯ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ನಡೆಯಿತು. ನ್ಯಾಯಾಲಯದಿಂದ ಮಮತಾ ಹೊರಬರುವಾಗ ಈ ಅಹಿತಕರ ಘಟನೆ ನಡೆದಿದೆ.

