ನವದೆಹಲಿ : ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2025ರ ಮೇ ತಿಂಗಳಲ್ಲಿ ಸಂಭವಿಸಿದ ಭೂಕುಸಿತವು 'ದೇವರ ಕೃತ್ಯ' ಆಗಿರುವುದರಿಂದ ಅಲ್ಲಿನ ಕೃಷಿ ಭೂಮಿ ಮಾಲೀಕರಿಗೆ ಪರಿಹಾರ ಪಾವತಿಸಲು ತಾನು ಬಾಧ್ಯಸ್ಥನಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ (ಎನ್ಜಿಟಿ) ತಿಳಿಸಿದೆ.
ಶಕ್ರಾಲ ಗ್ರಾಮದಿಂದ ಢಲ್ಲಿವರೆಗೆ ನಾಲ್ಕು ಪಥದ ರಸ್ತೆ ವಿಸ್ತರಣಾ ಯೋಜನೆಯಲ್ಲಿ ತೊಡಗಿರುವ ಎನ್ಎಚ್ಎಐ ಮತ್ತು ಅದರ ಏಜೆನ್ಸಿಗಳ ವಿರುದ್ಧ ಕೆಲ ಭೂ ಮಾಲೀಕರು ಈ ವರ್ಷದ ಜನವರಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಪ್ರಾಧಿಕಾರ ಈ ಉತ್ತರ ಸಲ್ಲಿಸಿದೆ.
'ಪ್ರಾಧಿಕಾರ ಮತ್ತು ಅದರ ಏಜೆನ್ಸಿಗಳು ಇಳಿಜಾರಿನ ಪ್ರದೇಶವನ್ನು ಸರಿಯಾಗಿ ಬಲಪಡಿಸದೆ, ಭಾರಿ ಪ್ರಮಾಣದ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿದ್ದವು. ಇದರಿಂದ ಶಿಮ್ಲಾದ ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿಗೆ ಹಾನಿ ಉಂಟಾಗಿ, ಭೂ ಕುಸಿತ ಸಂಭವಿಸಿದೆ' ಎಂದು ಭೂ ಮಾಲೀಕರು ಅರ್ಜಿಯಲ್ಲಿ ದೂರಿದ್ದರು. ಇದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಎನ್ಜಿಟಿ ಪ್ರಾಧಿಕಾರಕ್ಕೆ ಸೂಚಿಸಿತ್ತು.
ಮೇ 18ರಂದು ಪ್ರಮಾಣಪತ್ರ ಸಲ್ಲಿಸಿರುವ ಪ್ರಾಧಿಕಾರವು, 'ತನ್ನ ಏಜೆನ್ಸಿಯಿಂದ ನಿರ್ಮಿಸಲಾದ ತಡೆಗೋಡೆಗೆ 2025ರ ಮೇ 25ರಂದು ಹಾನಿಯಾದಾಗ ಸಂಭವಿಸಿದ ಘಟನೆಯನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ' ಎಂದು ಹೇಳಿದೆ.
ಎನ್ಎಚ್ಎಐ ಪ್ರತಿಪಾದನೆ ಏನು:
* ಈ ಘಟನೆಯು 'ದೇವರ ಕೃತ್ಯ'ದಿಂದ (ನೈಸರ್ಗಿಕ ವಿಕೋಪ) ಸಂಭವಿಸಿದೆ. ಹಿಮಾಚಲ ಪ್ರದೇಶದಲ್ಲಿ 2025ರ ಮೇ ಅಂತ್ಯದಲ್ಲಿ ಭಾರಿ ಮಳೆಯಾಗಿದ್ದು, ದೊಡ್ಡ ಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸಿದ್ದವು. ಯಾವುದೇ ನಿರ್ಮಾಣ ಕೈಗೊಳ್ಳದ ಸಾಕಷ್ಟು ಪ್ರದೇಶಗಳಲ್ಲೂ ವ್ಯಾಪಕವಾಗಿ ಭೂಕುಸಿತಗಳು ಘಟಿಸಿದ್ದವು
* ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ವರದಿ ಮತ್ತು ರಾಜ್ಯ ಸರ್ಕಾರ ಹೊರಡಿಸಿದ್ದ ವಿಪತ್ತು ಘೋಷಣೆಯು ತನ್ನ ಪ್ರತಿಪಾದನೆಯನ್ನು ಬೆಂಬಲಿಸುತ್ತದೆ
* ಯಾವುದೇ ವ್ಯಕ್ತಿ ಕಾರಣದಿಂದ ಅಥವಾ ಲೋಪದಿಂದ ಈ ಘಟನೆ ಸಂಭವಿಸಿಲ್ಲ. 'ದೇವರ ಕೃತ್ಯ' ಅಥವಾ ನೈಸರ್ಗಿಕ ವಿಕೋಪದಿಂದ ಹಾನಿ ಉಂಟಾದಾಗ, ಪ್ರಾಧಿಕಾರದ ಮೇಲೆ ಹೊಣೆಗಾರಿಕೆ ಹೇರಲು ಆಗುವುದಿಲ್ಲ
* ಜಮೀನೊಂದರಲ್ಲಿ 440 ಮರಗಳಿಗೆ ಹಾನಿಯಾಗಿದ್ದು, ₹32.3 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ, ಯೋಜನೆ ಕಾರ್ಯಗತಗೊಳಿಸುತ್ತಿರುವ 'ಮೆಸರ್ಸ್ ಗವರ್ ಶಿಮ್ಲಾ ಹೈವೇ ಪ್ರೈವೆಟ್ ಲಿಮಿಟೆಡ್' ಕೂಡ ನಷ್ಟದ ಮೌಲ್ಯಮಾಪನ ಮಾಡಿದ್ದು, ಅಲ್ಲಿ ಸೇಬಿನ 40 ಮರಗಳು ಮಾತ್ರ ಇದ್ದವು ಎಂದು ಮಾಹಿತಿ ನೀಡಿದೆ
* ಹೆದ್ದಾರಿ ಯೋಜನೆಗಾಗಿ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಅರ್ಜಿದಾರರ ವಾದದಲ್ಲಿ ತಿರುಳಿಲ್ಲ. ಭೂ ಸ್ವಾಧೀನ ಸಂಬಂಧ ಈ ವರ್ಷದ ಜನವರಿಯಲ್ಲಿಯೇ ಅಧಿಸೂಚನೆ ಹೊರಡಿಸಲಾಗಿದೆ
* ಪ್ರಾಧಿಕಾರ ಅಥವಾ ತನ್ನ ಏಜೆನ್ಸಿಯಿಂದ ಪರಿಸರ ಅಥವಾ ಅರಣ್ಯ ತೆರವಿನ ಷರತ್ತುಗಳ ಉಲ್ಲಂಘನೆ ಆಗಿಲ್ಲ. ಅರ್ಜಿದಾರರು ಭೂಕುಸಿತಕ್ಕೆ ಕಾರಣವಾದ ನಿರ್ದಿಷ್ಟ ಕೃತ್ಯ ಅಥವಾ ಲೋಪವನ್ನು ತೋರಿಸದೆ ಪರಿಹಾರ ಕೋರಿದ್ದಾರೆ.

