ಚಂಡೀಗಢ: ಕಾರ್ಮಿಕರ ದಿನದ ಅಂಗವಾಗಿ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತೂರಾಡಿಕೊಂಡು ಮದ್ಯಪಾನದ ಅಮಲಿನಲ್ಲಿ ಸದನಕ್ಕೆ ಬಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಂಜಾಬ್ ವಿಧಾನಸಭೆಯಲ್ಲಿ ಶುಕ್ರವಾರ ಭಾರಿ ಗದ್ದಲ ಉಂಟಾಯಿತು.
ಕಾಂಗ್ರೆಸ್ ಶಾಸಕರೊಬ್ಬರು ಮುಖ್ಯಮಂತ್ರಿಯವರ ಮೇಲೆ ಈ ಆರೋಪ ಮಾಡುತ್ತಿದ್ದಂತೆ ಸದನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಎಲ್ಲ ಶಾಸಕರಿಗೂ ಆಲ್ಕೋಹಾಲ್ ಮೀಟರ್ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು. "ರಾಜ್ಯದ ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವುದರಿಂದ ಸತ್ಯಾಸತ್ಯತೆ ಹೊರತರುವ ಉದ್ದೇಶದಿಂದ ಪ್ರತಿಯೊಬ್ಬ ಸದಸ್ಯನಿಗೂ ಪರೀಕ್ಷೆ ನಡೆಸಬೇಕು" ಎಂದು ಅವರು ಹೇಳಿದರು.
ಶಿರೋಮಣಿ ಅಕಾಲಿ ದಳ ಕೂಡ ಈ ವಿಚಾರದಲ್ಲಿ ಆಗ್ರಹಿಸಿದ್ದು, ವಿಧಾನಸಭೆಯ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಯವರ ವಿರುದ್ಧ ಟೀಕಿಸಿದೆ. ಕಾರ್ಮಿಕ ದಿನದಂದು ಮದ್ಯ ಸೇವಿಸಿ ತೂರಾಡಿಕೊಂಡು ಸದನಕ್ಕೆ ಬಂದಿದ್ದಾರೆ ಎನ್ನುವುದು "ನಾಚಿಕೆಗೇಡಿನ ಸಂಗತಿ" ಎಂದು ಪಕ್ಷ ಹೇಳಿಕೆ ನೀಡಿದೆ. ಮುಖ್ಯಮಂತ್ರಿಯವರ ನಡವಳಿಕೆಯನ್ನು ಸಾರ್ವಜನಿಕರು ಗಮನಿಸಬೇಕೆಂದು ಮನವಿ ಮಾಡಿದೆ.
ಮುಖ್ಯಮಂತ್ರಿಯನ್ನು ಸಾರ್ವಜನಿಕವಾಗಿ ಡೋಪ್ ಪರೀಕ್ಷೆಗೆ ಒಳಪಡಿಸಬೇಕು ಎಂಬ ಬೇಡಿಕೆಯನ್ನು ಅಕಾಲಿ ದಳ ಮುಂದಿಟ್ಟಿದೆ. ಇದರಿಂದ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಭಗವಂತ್ ಮಾನ್, ಕಾರ್ಮಿಕ ದಿನದ ವಿಶೇಷ ಅಧಿವೇಶನವು ಕಾರ್ಮಿಕ ವರ್ಗಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಕರೆದಿರುವುದಾಗಿ ಸ್ಪಷ್ಟಪಡಿಸಿದರು. ಅನಾವಶ್ಯಕ ಆರೋಪ-ಪ್ರತ್ಯಾರೋಪಗಳನ್ನು ತಪ್ಪಿಸಿ ಸದನದ ಗೌರವ ಕಾಪಾಡಿಕೊಳ್ಳಬೇಕು ಎಂದು ಅವರು ಸದಸ್ಯರಿಗೆ ಮನವಿ ಮಾಡಿದರು.
ರಾಜ್ಯದ ಕಾರ್ಮಿಕರಿಗೆ ಗೌರವ ಸಲ್ಲಿಸಲು ಮೇ 1ರಂದು ವಿಶೇಷ ಅಧಿವೇಶನವನ್ನು ಕರೆದಿರುವುದಾಗಿ ಆಮ್ ಆದ್ಮಿ ಪಕ್ಷದ ಸರಕಾರ ತಿಳಿಸಿತ್ತು. ಆದರೆ, ಸರಕಾರ ತನ್ನ ಅಧಿಕಾರಾವಧಿಯ ಕೊನೆಯ ಹಂತದಲ್ಲಿರುವ ಸಂದರ್ಭದಲ್ಲಿಯೇ ಈ ಅಧಿವೇಶನದ ಉದ್ದೇಶವೇನು ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ನಾಯಕರು ಎತ್ತಿದ್ದಾರೆ.

