ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಲು ನಿರ್ಧರಿಸಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಪರಿಶೀಲನೆಗಾಗಿ ಪರಿಣಿತರ ಸಮಿತಿ ರಚಿಸುವಂತೆ ಕೇಂದ್ರಕ್ಕೆ ನ್ಯಾಯಾಲಯ ಸೂಚಿಸಿದೆ.
'ಸುತ್ತೋಲೆಯಲ್ಲಿನ ಬದಲಾವಣೆಯೇ ಎಲ್ಲವನ್ನೂ ಹೇಳುತ್ತದೆ. ಈ ರೀತಿ ನಡೆದುಕೊಳ್ಳಬೇಡಿ. ಇದು ಕ್ರೀಡೆಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಡಿ. ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ಅಭಿಪ್ರಾಯಪಟ್ಟಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಫೋಗಟ್ ಅವರು ಅನರ್ಹಗೊಂಡಿರುವುದು 'ಅವಮಾನ' ಎಂದು ಉಲ್ಲೇಖಿಸಿರುವ ಶೋಕಾಸ್ ನೋಟಿಸ್ಗೂ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಫೋಗಟ್ ಅವರನ್ನು ಕ್ರೀಡೆಯಿಂದ ಹೊರಗಿಡುವ ಉದ್ದೇಶದಿಂದಲೇ ಆಯ್ಕೆಯ ಮಾನದಂಡಗಳನ್ನು ಬದಲಾಯಿಸಿದಂತಿದೆ ಎಂದು ಹೇಳಿದೆ.
'ಜುಲೈ 2025ರಲ್ಲಿ ವಿನೇಶ್ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಮೇ ತಿಂಗಳು. ವಿನೇಶ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕುಸ್ತಿಪಟು. ನೀವು ಅವರಿಗಾಗಿಯೇ ಆಯ್ಕೆ ಮಾನದಂಡವನ್ನು ಬದಲಾಯಿಸಿದ್ದೀರಿ ಎಂದು ಏಕೆ ಭಾವಿಸಬಾರದು? ಎಷ್ಟೇ ದ್ವೇಷ ಅಥವಾ ವಿವಾದಗಳಿದ್ದರೂ, ಕ್ರೀಡೆಯ ಹಿತಾಸಕ್ತಿಗೆ ಏಕೆ ಧಕ್ಕೆ ತರಬೇಕು? ದೇಶದಲ್ಲಿ ತಾಯ್ತನವನ್ನು ಸಂಭ್ರಮಿಸಲಾಗುತ್ತದೆ. ಆದರೆ ಅದು ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಮಾರಕವಾಗಬೇಕೇ?' ಎಂದು ಮೌಖಿಕವಾಗಿ ಪ್ರಶ್ನಿಸಿದೆ.
ಅಲ್ಲದೇ, ವಿನೇಶ್ ಅವರು ಮುಂಬರುವ ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರಕ್ಕೆ ಸೂಚಿಸಿದೆ.
ಡಬ್ಲ್ಯುಎಫ್ಐನಿಂದ ಅನರ್ಹಗೊಂಡರೂ ಮೇ 30 ಮತ್ತು 31ರಂದು ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ವಿನೇಶ್ ಈ ಹಿಂದೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಆ ಮನವಿಯನ್ನು ಏಕಸದಸ್ಯ ಪೀಠ ನಿರಾಕರಿಸಿತ್ತು. ಇದರ ವಿರುದ್ಧ ವಿನೇಶ್ ಮೇಲ್ಮನವಿ ಸಲ್ಲಿಸಿದ್ದಾರೆ.

