ಇಸ್ಲಮಾಬಾದ್: 'ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪ್ರತಿಭಟನೆಗಳು ತೀವ್ರಗೊಂಡಿದೆ. ಗುರುವಾರ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ನಡೆದ ಸಂಘರ್ಷದಲ್ಲಿ 15 ಮಂದಿ ಮೃತಪಟ್ಟಿದ್ದಾರೆ' ಎಂದು ಬಿಬಿಸಿ ಉರ್ದು ವರದಿ ಮಾಡಿದೆ.
11 ಮಂದಿ ಸಾರ್ವಜನಿಕರು ಮತ್ತು ನಾಲ್ಕು ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ರಾವಲ್ಕೋಟ್ನಿಂದ 4 ಕಿ.ಮೀ ದೂರದಲ್ಲಿ ಸುಮಾರು 10,000 ಮಂದಿ (ಸರ್ಕಾರದ ಅಂದಾಜು) ಪ್ರತಿಭಟನಕಾರರು ಪಿಒಕೆ ರಾಜಧಾನಿ ಮುಜಾಫರಬಾದ್ಗೆ ರ್ಯಾಲಿ ಮೂಲಕ ತೆರಳುತ್ತಿದ್ದರು.
ಭದ್ರತಾ ಸಿಬ್ಬಂದಿ ಪ್ರತಿಭಟನಕಾರರನ್ನು ತಡೆಯಲು ಯತ್ನಿಸಿದ ವೇಳೆ ಸಂಘರ್ಷ ನಡೆದಿದೆ. 'ಪ್ರತಿಭಟನಕಾರರ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ' ಎಂದು ಎನ್ಡಿಟಿವಿ ವರದಿ ಮಾಡಿದೆ.
ಜುಲೈನಲ್ಲಿ ಪಿಒಕೆಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಕಾಶ್ಮೀರದ ನಿರಾಶ್ರಿತರಿಗೆ 12 ಸ್ಥಾನಗಳನ್ನು ಮೀಸಲಿಡಲಾಗಿದೆ. ಇದನ್ನು ವಿರೋಧಿಸಿ ಈ ಪ್ರದೇಶದ ಪ್ರಮುಖ ಪಕ್ಷದ ದಿ ಜಾಯಿಂಟ್ ಅವಾಮಿ ಆಯಕ್ಷನ್ ಕಮಿಟಿ (ಜೆಎಎಸಿ) ಪ್ರತಿಭಟನೆಗೆ ಕರೆ ನೀಡಿದೆ. ಈ ಕಾರಣ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿತ್ತು. ಮಸೀದಿ ಮೂಲಕವೂ ಘೋಷಣೆ ಕೂಗಿಸಲಾಗಿತ್ತು. 'ಪ್ರತಿಭಟನೆಯು ಹಿಂಸಾ ಸ್ವರೂಪ ತಾಳುವ ಸಂಭವವಿದೆ. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು. ಪ್ರತಿಭಟನಕಾರರು ಮುಜಾಫರಬಾದ್ಗೆ ತೆರಳಲು ಬಿಡುವುದಿಲ್ಲ' ಎಂದು ಪಿಒಕೆಯ ಪೂಂಜ್ ಜಿಲ್ಲೆಯ ಕಮಿಷನರ್ ಸರ್ದಾರ್ ವಹೀದ್ ಖಾನ್ ಬಿಬಿಸಿಗೆ ತಿಳಿಸಿದರು.

