ನವದೆಹಲಿ: ಬಂಡಾಯ ಸಂಸದರ ಅನರ್ಹತೆ ಕೋರಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪಕ್ಷದಿಂದ 20 ಅರ್ಜಿ ಸಲ್ಲಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಸಂಸದರು ಪ್ರತ್ಯೇಕವಾಗಿ ಮತ್ತೊಂದು ಪಕ್ಷದ ಜೊತೆ ವಿಲೀನಗೊಳ್ಳಲು ಬರುವುದಿಲ್ಲ.
ಇದು ಅನರ್ಹತೆಗೆ ಎಡೆಮಾಡುತ್ತದೆ. ಲೋಕಸಭಾ ಸ್ಪೀಕರ್ ಅವರಿಂದ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಸ್ಪೀಕರ್ ಭೇಟಿ ಬಳಿಕ ಹೇಳಿದ್ದಾರೆ.
'3-4 ದಿನಗಳ ಹಿಂದೆ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದ ಟಿಎಂಸಿಯ 20 ಸಂಸದರು ಪ್ರತ್ಯೇಕ ಗುಂಪು ರಚಿಸುವುದಾಗಿ ಹೇಳಿಕೊಂಡಿದ್ದರು. ಮಾಧ್ಯಮಗಳ ಪ್ರಕಾರ, ಅವರು ಪ್ರತ್ಯೇಕ ಗುಂಪಾಗಿ ಪರಿಗಣಿಸಲ್ಪಡುವುದಾಗಿ ಹೇಳಿಕೊಂಡಿದ್ದಾರೆ. ಕೆಲವು ಗಂಟೆಗಳ ನಂತರ ಅವರಲ್ಲಿ 2-4 ಮಂದಿ ಎನ್ಸಿಪಿಐ ಜೊತೆ ವಿಲೀನಗೊಂಡಿದ್ದೇವೆ ಎಂದು ಘೋಷಿಸಿದ್ದಾರೆ. ಟಿಎಂಸಿಯ ಲೋಕಸಭಾ ನಾಯಕನಾಗಿ ನಾನು ಈ ಸಂಸದರ ಅನರ್ಹತೆ ಕೋರಿ 20 ವಿಭಿನ್ನ ಅರ್ಜಿಗಳನ್ನು ಸಲ್ಲಿಸಿದ್ದೇನೆ. ಸಂವಿಧಾನದ 10ನೇ ಪರಿಚ್ಛೇದವು ಅವರ ನಡೆಯ ವಿರುದ್ಧವಾಗಿದೆ. ಪ್ರತ್ಯೇಕ ಗುಂಪನ್ನು ರಚಿಸಿದ್ದೇವೆ ಎಂದು ಹೇಳಿಕೊಳ್ಳುವ ಈ ಜನರಿಗೆ ಸ್ವಲ್ಪವಾದರೂ ಘನತೆ ಇದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಅಭಿಷೇಕ್ ಸಂಸತ್ತಿನ ಹೊರಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರತಿ ಅರ್ಜಿಯು 21 ಪುಟಗಳಷ್ಟು ಉದ್ದವಾಗಿದ್ದು, ಮಾಧ್ಯಮ ವರದಿಗಳ ಲಗತ್ತನ್ನು ಹೊಂದಿದೆ. ಸ್ಪೀಕರ್ ಸಂವಿಧಾನದಲ್ಲಿನ ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
'ನಮ್ಮ ಎಲ್ಲ ಮನವಿಯನ್ನು ಈ ಅರ್ಜಿಗಳಲ್ಲಿ ಸೇರಿಸಲಾಗಿದೆ. ಈ ಸಂಬಂಧಿತ ಎಲ್ಲ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ. ಪ್ರತಿಯೊಂದು ಅರ್ಜಿಯು 21 ಪುಟಗಳಷ್ಟು ಉದ್ದವಾಗಿದೆ. ನಮ್ಮ ಗಮನಕ್ಕೆ ಬಂದ ಎಲ್ಲ ಮಾಧ್ಯಮ ವರದಿಗಳನ್ನು ಸಹ ಲಗತ್ತಿಸಿದ್ದೇವೆ. ಸ್ಪೀಕರ್ ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಲೋಕಸಭಾ ಸ್ಪೀಕರ್ ಸದನದ ಉಸ್ತುವಾರಿ ಯಾಗಿರುತ್ತಾರೆಯೇ ಹೊರತು ಸರ್ಕಾರದ ರಕ್ಷಕರಲ್ಲ'ಎಂದಿದ್ದಾರೆ.
ಜೂನ್ 14 ರಂದು, ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ 20 ಬಂಡಾಯ ಸಂಸದರು 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ'ದೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿದ್ದರು. ಲೋಕಸಭೆಯಲ್ಲಿ ಪ್ರತ್ಯೇಕ ಸ್ಥಾನಗಳನ್ನು ಹಂಚಿಕೆ ಮಾಡುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದ್ದರು.

