ನವದೆಹಲಿ: ಒಡಿಶಾ, ಮಿಜೋರಾಂ, ಸಿಕ್ಕಿಂ ಮತ್ತು ಮಣಿಪುರ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಮತದಾರರ ಎಣಿಕೆ ಹಂತವು ಪ್ರಾರಂಭವಾಗಿದೆ ಎಂದು ಚುನಾವಣಾ ಆಯೋಗ ರವಿವಾರ ತಿಳಿಸಿದೆ.
ಚುನಾವಣಾ ಆಯೋಗವು ಮೇ 14 ರಂದು, 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ನ 3ನೇ ಹಂತವನ್ನು ಹಂತ-ಹಂತವಾಗಿ ಪ್ರಾರಂಭಿಸಿತ್ತು.
ಶನಿವಾರ ಆರಂಭವಾದ ಈ ಎಣಿಕೆ ಹಂತದಲ್ಲಿ, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ-ಮನೆಗೆ ಭೇಟಿ ನೀಡಿ ಎಣಿಕೆ ಅರ್ಜಿಗಳನ್ನು ವಿತರಿಸುವುದು, ಸಂಗ್ರಹಿಸುವುದು ಮತ್ತು ಪರಿಶೀಲಿಸುವ ಕಾರ್ಯವನ್ನು ಮಾಡಲಿದ್ದಾರೆ.
ಮತದಾರರು ತಮ್ಮ ಭರ್ತಿ ಮಾಡಿದ ಅರ್ಜಿಗಳನ್ನು ಬಿಎಲ್ಒಗಳ ಮೂಲಕ ಅಥವಾ ಆನ್ಲೈನ್ ಮೂಲಕ ಸಲ್ಲಿಸಬಹುದು.
ಜೂನ್ 28 ರಂದು ಅಥವಾ ಅದಕ್ಕೂ ಮೊದಲು ಯಾರ ಅರ್ಜಿಗಳು ಚುನಾವಣಾ ನೋಂದಣಾಧಿಕಾರಿಗಳಿಗೆ ತಲುಪುತ್ತವೆಯೋ, ಅಂತಹವರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
ನಿಗದಿತ ಅವಧಿಯೊಳಗೆ ತಮ್ಮ ಎಣಿಕೆ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗದ ಮತದಾರರು, ಆಕ್ಷೇಪಣೆಗಳ ಅವಧಿಯಲ್ಲಿ ನಿಗದಿತ ಘೋಷಣಾ ಪತ್ರದೊಂದಿಗೆ 'ಫಾರ್ಮ್ 6' ಮೂಲಕ ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು.
ಪ್ರಸ್ತುತ ಹಂತದಲ್ಲಿ ಒಳಗೊಂಡಿರುವ ನಾಲ್ಕು ರಾಜ್ಯಗಳು ಒಟ್ಟಾಗಿ 3.67 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿವೆ.

