ಮಾನಪುರ(PTI): ಅತಿವೇಗದಲ್ಲಿ ಸಾಗುತ್ತಿದ್ದ ಟ್ರಕ್ ಚಾಲಕನೊಬ್ಬ 11 ವರ್ಷದ ಬಾಲಕಿಗೆ ಟ್ರಕ್ ಡಿಕ್ಕಿ ಹೊಡೆಸಿ, ಪೊಲೀಸ್ ಬ್ಯಾರಿಕೇಡ್ ಅನ್ನೂ ಮೀರಿ ಪರಾರಿಯಾಗಲು ಯತ್ನಿಸಿದ್ದ. ಬಳಿಕ ಪೊಲೀಸರು 60 ಕಿ.ಮೀ ಬೆನ್ನಟ್ಟಿ ಛತ್ತೀಸಗಢ- ಮಹಾರಾಷ್ಟ್ರ ಗಡಿ ಸಮೀಪ ಆತನನ್ನು ಬಂಧಿಸಿದ್ದಾರೆ.
ಮೊಹ್ಲಾ-ಮಾನಪುರ-ಅಂಬಗಢ ಚೌಕಿ ಮಾರ್ಗದಲ್ಲಿ ಅತಿ ವೇಗವಾಗಿ ಸಾಗುತ್ತಿದ್ದ ಚಾಲಕನನ್ನು ಸತತ ಎರಡು ತಾಸು ಬೆನ್ನಟ್ಟಿ, ಮಹಾರಾಷ್ಟ್ರ ಗಡಿಯಿಂದ ಕೇವಲ 6 ಕಿ.ಮೀ ದೂರದಲ್ಲಿ ಬಂಧಿಸಲಾಗಿದೆ. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಚಾಲಕ ವೇಗವಾಗಿ ಸಾಗುತ್ತಿರುವ ಸಂದರ್ಭದ ಕೆಲವು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಟ್ರಕ್ ಗುದ್ದಿದ ರಭಸಕ್ಕೆ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ' ಎಂದು ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ್ ಪಟೇಲ್ ತಿಳಿಸಿದ್ದಾರೆ.
'ಆರೋಪಿಯು ಬಾಲಕಿಗೆ ಟ್ರಕ್ ಅನ್ನು ಗುದ್ದಿಸಿದ ಬಳಿಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದ. ವಿಷಯ ತಿಳಿದ ತಕ್ಷಣವೇ ಚಾಲಕನನ್ನು ಬಂಧಿಸಲು ಮೊಹ್ಲಾ ಪೊಲೀಸ್ ಠಾಣೆ ಬಳಿ ಬ್ಯಾರಿಕೇಡ್ ಹಾಕಲಾಗಿತ್ತು. ಆದರೆ ಚಾಲಕ ಬ್ಯಾರಿಕೇಡ್ಗಳಿಗೆ ಲಾರಿಯನ್ನು ಡಿಕ್ಕಿ ಹೊಡೆಸಿ ಮುಂದಕ್ಕೆ ಸಾಗಿದ. ಪೊಲೀಸರು ಆತನನ್ನು ಬೆನ್ನಟ್ಟಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಮೇಲೂ ವಾಹನ ಹತ್ತಿಸಲು ಯತ್ನಿಸಿದ್ದ' ಎಂದು ಪಟೇಲ್ ಹೇಳಿದ್ದಾರೆ.
ಚಾಲಕ ಗಾಯಗೊಂಡಿದ್ದು, ಮದ್ಯ ಸೇವಿಸಿದ್ದ ಎಂದು ಹೇಳಲಾಗಿದೆ. ಆತನನ್ನು ಮಾನಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಇರುವ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಗ್ರಾಮಸ್ಥರು ಬಾಲಕಿಯ ಮೃತದೇಹವನ್ನು ರಸ್ತೆಯ ಮೇಲಿಟ್ಟು ವಾಹನ ಸಂಚಾರ ಬಂದ್ ಮಾಡಿ ಪ್ರತಿಭಟಿಸಿದರು. ಇದರಿಂದಾಗಿ ಎರಡು ತಾಸು ವಾಹನದಟ್ಟಣೆ ಉಂಟಾಗಿತ್ತು. ಚಾಲಕನ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಬಳಿಕವೇ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು.

