ಠಾಣೆ/ಪುಣೆ (PTI): ಪರೀಕ್ಷಾ ದಿನಾಂಕಕ್ಕೂ ಒಂದು ದಿನ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಮಹಾರಾಷ್ಟ್ರದಲ್ಲಿ ಭಾನುವಾರ ನಡೆಯಬೇಕಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ-2026) ಮುಂದೂಡಿಕೆಯಾಗಿದೆ.
ಶನಿವಾರ ಪ್ರಶ್ನೆಪತ್ರಿಕೆಯ ಕೆಲ ಅಂಶಗಳು ಸೋರಿಕೆಯಾಗಿದ್ದವು.
ಅಂತರರಾಜ್ಯ ಜಾಲವೊಂದನ್ನು ಪತ್ತೆಹಚ್ಚಿದ್ದ ಭಿವಾಂಡಿ ಪೊಲೀಸರು ಬಿಹಾರ ಮತ್ತು ಹರಿಯಾಣದ ಮೂವರನ್ನು ಮೂಲ ಪ್ರತಿಗಳೊಂದಿಗೆ ಬಂಧಿಸಿದ್ದರು. ಶಿಕ್ಷಣ ಇಲಾಖೆ ಮೂಲ ಪ್ರಶ್ನೆಪತ್ರಿಕೆ ಎಂದು ದೃಢಪಡಿಸಿತ್ತು.
'ಜೂನ್ 28ರಂದು ನಿಗದಿಯಾಗಿರುವ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣದಿಂದ ಮುಂದೂಡಲಾಗಿದೆ. ಪರಿಷ್ಕೃತ ದಿನಾಂಕವನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು' ಎಂದು ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಪರಿಷತ್ತಿನ (ಎಂಎಸ್ಸಿಇ) ಉಪ ಆಯುಕ್ತರಾದ ಪ್ರಿಯಾ ಶಿಂದೆ ತಿಳಿಸಿದ್ದಾರೆ.
ಭಾನುವಾರ 37 ಸ್ಥಳಗಳ 1,728 ಕೇಂದ್ರಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಟಿಇಟಿ ಪರೀಕ್ಷೆ ಬರೆಯಬೇಕಿತ್ತು.
ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದು, ವಿವಿಧ ರಾಜ್ಯಗಳಿಗೆ ತೆರಳಿರುವ ಪೊಲೀಸರು ಪ್ರಶ್ನೆಪತ್ರಿಕೆ ಸೋರಿಕೆಯ ಮೂಲ ಮತ್ತು ಪ್ರಮುಖ ಸೂತ್ರದಾರರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಆದಿತ್ಯ ಠಾಕ್ರೆ -ಏಕನಾಥ ಶಿಂದೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಅಪರಾಧಿಗಳು ಯಾರೇ ಆಗಿದ್ದರೂ ಯಾವುದೇ ಸ್ಥಾನಮಾನದಲ್ಲಿದ್ದರೂ ಎಷ್ಟೇ ದೊಡ್ಡ ಜಾಲವಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು
ಏಕನಾಥ ಶಿಂದೆ'ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಬೇಕಿದ್ದ ಬಿಜೆಪಿ ನಾಯಕರು ಪಕ್ಷಗಳನ್ನು ಒಡೆಯುವಲ್ಲಿ ಸಂವಿಧಾನ ಬದಲಿಸುವ ಯತ್ನಗಳಲ್ಲಿ ನಿರತರಾಗಿದ್ದಾರೆ' ಎಂದು ತಮ್ಮ 'ಎಕ್ಸ್' ಖಾತೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಟೀಕಿಸಿದ್ದಾರೆ. 'ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಪ್ರಭಾವ ಇರುವ ಠಾಣೆ ಜಿಲ್ಲೆಯಲ್ಲೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ವಂಚಕರ ಜಾಲಕ್ಕೆ ರಾಜಕೀಯ ಶ್ರೀರಕ್ಷೆ ಇದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ' ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಆರೋಪಿಸಿದ್ದಾರೆ.

