ನವದೆಹಲಿ: ಅಹಮದಾಬಾದ್ನ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿ ಶುಕ್ರವಾರಕ್ಕೆ (ಜೂನ್ 12) ಭರ್ತಿ ಒಂದು ವರ್ಷ ಪೂರ್ಣಗೊಂಡಿದೆ. ಈ ಭೀಕರ ದುರಂತದ ಕುರಿತಾದ ಅಂತಿಮ ತನಿಖಾ ವರದಿಯನ್ನು ಸಲ್ಲಿಸಲು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಇನ್ನಷ್ಟು ಕಾಲಾವಕಾಶ ಕೋರಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲಾದ ಸಾಕ್ಷ್ಯಗಳು ಮತ್ತು ವಿವಿಧ ತಾಂತ್ರಿಕ ಪರೀಕ್ಷೆಗಳ ಫಲಿತಾಂಶಗಳನ್ನು ಸಮಗ್ರವಾಗಿ ವಿಶ್ಲೇಷಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, 'ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯಮಾವಳಿಗೆ ಅನುಗುಣವಾಗಿ ಅತ್ಯಂತ ವೃತ್ತಿಪರ ಹಾಗೂ ದಕ್ಷತೆಯಿಂದ ತನಿಖೆ ಮುಂದುವರಿದಿದೆ. ಅಪಘಾತಕ್ಕೆ ನಿಖರವಾದ ಕಾರಣಗಳನ್ನು ಪತ್ತೆಹಚ್ಚಲು ಮತ್ತು ವಿಮಾನಯಾನ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ' ಎಂದು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ನಿಯಮಾವಳಿ ಪ್ರಕಾರ, ಎಲ್ಲಾ ತನಿಖಾ ಚಟುವಟಿಕೆಗಳು ಮತ್ತು ಜಾಗತಿಕ ಮಟ್ಟದ ಮರುಪರಿಶೀಲನಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ಅಂತಿಮ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಎಎಐಬಿ ಹೇಳಿದೆ. ಐಸಿಎಒ ಅನೆಕ್ಸ್ 13ರ ನಿಯಮಗಳ ಅಡಿಯಲ್ಲಿ ಅಪಘಾತ ನಡೆದ 30 ದಿನಗಳ ಒಳಗೆ ಪ್ರಾಥಮಿಕ ವರದಿ ಹಾಗೂ 12 ತಿಂಗಳ ಒಳಗೆ ಅಂತಿಮ ವರದಿ ನೀಡುವುದು ಕಡ್ಡಾಯವಾಗಿದ್ದರೂ, ವಿಶೇಷ ಸಂದರ್ಭಗಳಲ್ಲಿ ಗಡುವನ್ನು ವಿಸ್ತರಿಸಲು ಅವಕಾಶವಿದೆ.
ತನಿಖೆಯ ಪ್ರಗತಿಯ ಕುರಿತು ಪ್ರಕಟಣೆ ಹೊರಡಿಸಿರುವ ಎಎಐಬಿ, 'ಸಂಗ್ರಹಿಸಲಾದ ಭೌತಿಕ ಪುರಾವೆಗಳನ್ನು ವಿಶ್ಲೇಷಿಸಲಾಗುತ್ತಿದೆ. ತನಿಖೆಯ ಪ್ರತಿಯೊಂದು ತೀರ್ಮಾನಕ್ಕೂ ನಿಖರವಾದ ಸಾಕ್ಷ್ಯಗಳ ಬೆಂಬಲ ಇರಬೇಕು ಎಂಬ ಕಾರಣಕ್ಕೆ, ಅಗತ್ಯವಿರುವ ಕಡೆಗಳಲ್ಲಿ ತಜ್ಞರ ಮೂಲಕ ಮರುಪರಿಶೀಲನೆ ನಡೆಸಲಾಗುತ್ತಿದೆ' ಎಂದು ಸ್ಪಷ್ಟಪಡಿಸಿದೆ.
ಏರ್ ಇಂಡಿಯಾ ವಿಮಾನ ದುರಂತ
2025ರ ಜೂನ್ 12ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI -171 ಟೇಕ್ -ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರ ಪ್ರದೇಶದ ವೈದ್ಯಕೀಯ ಹಾಸ್ಟೆಲ್ ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಘಟನೆಯಲ್ಲಿ ವಿಮಾನದಲ್ಲಿದ್ದ 241 ಜನ ಮತ್ತು ಹಾಸ್ಟೆಲ್ನಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದರು.

