ನವದೆಹಲಿ: ಏರ್ ಇಂಡಿಯಾ ಂI-171 ವಿಮಾನ ದುರಂತದ ತನಿಖೆ ಅಂತಿಮ ಹಂತದಲ್ಲಿದ್ದರೂ, ಅಂತರರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವೇ ಅಂತಿಮ ವರದಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ದುರಂತ ಸಂಭವಿಸಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ತನಿಖೆಯನ್ನು ಅವಸರದಲ್ಲಿ ಮುಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
'ಇದು ಅತ್ಯಂತ ಗಂಭೀರ ತನಿಖೆಯಾಗಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾರ್ಯವಿಧಾನಗಳಿಗೆ ಅನುಗುಣವಾಗಿ ತನಿಖೆ ನಡೆಯುತ್ತಿದೆ. ಅಂತರರಾಷ್ಟ್ರೀಯ ಶಿಷ್ಟಾಚಾರಗಳನ್ನು ಪಾಲಿಸಿದ ಬಳಿಕವೇ ಅಂತಿಮ ವರದಿ ಪ್ರಕಟಿಸಲಾಗುವುದು' ಎಂದು ಹೇಳಿದರು.
ದುರಂತದಲ್ಲಿ ಮೃತಪಟ್ಟವರನ್ನು ಸ್ಮರಿಸಿದ ಸಚಿವರು, ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದರು.
ಂI-171 ದುರಂತದ ಬಳಿಕ ಏರ್ ಇಂಡಿಯಾ 'ಸುರಕ್ಷತಾ ವಿರಾಮ' ಘೋಷಿಸಿತ್ತು. ಈ ಅವಧಿಯಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಆಉಅಂ) ಮೇಲ್ವಿಚಾರಣೆಯಲ್ಲಿ ಬೋಯಿಂಗ್ 787-8 ಮತ್ತು 787-9 ವಿಮಾನಗಳ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಯಾವುದೇ ತಾಂತ್ರಿಕ ಸಮಸ್ಯೆಗಳು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದರು.
ಬೋಯಿಂಗ್ 737 ಮತ್ತು 787-8 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್ ಗಳ ಕಾರ್ಯವಿಧಾನವನ್ನೂ ಪರಿಶೀಲಿಸಲಾಗಿದ್ದು, ಯಾವುದೇ ದೋಷ ಕಂಡುಬಂದಿಲ್ಲ ಎಂದರು.
ಬೋಯಿಂಗ್ 787 ಮತ್ತು 777 ಮಾದರಿಯ ಅಗಲಕಾಯ ವಿಮಾನಗಳ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸಲು ಏರ್ ಇಂಡಿಯಾ ಕಳೆದ ಒಂದು ವರ್ಷದಲ್ಲಿ ವಿಶೇಷ ಗಮನ ಹರಿಸಿದೆ. ಬೋಯಿಂಗ್ 787 ವಿಮಾನಗಳ ವಿಶ್ವಾಸಾರ್ಹತೆ ಹೆಚ್ಚಿಸುವ ಕಾರ್ಯಕ್ರಮಗಳ ಅನುಷ್ಠಾನವೂ ಗಮನಾರ್ಹವಾಗಿ ಹೆಚ್ಚಿದೆ ಎಂದು ಹೇಳಿದರು.
ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ 'ವೆಲ್ನೆಸ್.ಎಐ' ಕಾರ್ಯಕ್ರಮದಡಿ 265 ಮನಃಶಾಸ್ತ್ರಜ್ಞರನ್ನು ನೇಮಕ ಮಾಡಲಾಗಿದೆ. ಅವರು ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಗೌಪ್ಯ ಸಮಾಲೋಚನೆ ಮತ್ತು ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

