ಲಖನೌ: ಆಕ್ರಮಣಕಾರರಿಗೆ, ದೇಶದ ಬಗ್ಗೆ ನಿಷ್ಠೆ ಇಲ್ಲದವರಿಗೆ, ನಮ್ಮ ಸಂಪ್ರದಾಯಗಳ ಬಗ್ಗೆ ಗೌರವ ಇಲ್ಲದವರ ಪಾಲಿಗೆಲ್ಲಾ ಭಾರತ ಧರ್ಮಶಾಲೆಯಾಗಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಹೇಳಿದ್ದಾರೆ.
ಕಳೆದ 9 ದಿನಗಳಿಂದ ಇಲ್ಲಿ ನೆರವೇರಿದ ಶ್ರೀರಾಮ ಕಥಾ ಮಹೋತ್ಸವದ ಸಮಾರೋಪವು ಮಂಗಳವಾರ ನಡೆದಿದೆ.
ಈ ವೇಳೆ ಪಾಲ್ಗೊಂಡು ಮಾತನಾಡಿದ ಸಿ.ಎಂ ಯೋಗಿ, 'ಲವ್ ಜಿಹಾದ್' 'ಲ್ಯಾಂಡ್ ಜಿಹಾದ್' ಬಗ್ಗೆ ಎಚ್ಚರವಹಿಸುವಂತೆಯೂ ಜನರಿಗೆ ಕರೆ ನೀಡಿದ್ದಾರೆ.
'ಪೂರ್ವಾಗ್ರಹ ಪೀಡಿತರಾಗಿರುವ ಹಾಗೂ ರಾಜಕೀಯ ಪ್ರೇರಿತರಾದ ಕೆಲವು ವ್ಯಕ್ತಿಗಳನ್ನು ಹೊರತುಪಡಿಸಿ ಭಾರತದ ಡಿಎನ್ಎ ಹಾಗೂ ಯಾವುದೋ ಒಂದು ರೂಪದಲ್ಲಿ ರಾಮನ ಆದರ್ಶಗಳನ್ನು ಜೀವನದ ಭಾಗವನ್ನಾಗಿಸಿಕೊಂಡಿರದ ಯಾವುದೇ ವ್ಯಕ್ತಿಯನ್ನು ನೀವು ದೇಶದಲ್ಲಿ ನೋಡಲು ಸಾಧ್ಯವಿಲ್ಲ' ಎಂದು ಯೋಗಿ ಪ್ರತಿಪಾದಿಸಿದ್ದಾರೆ.
ಧರ್ಮಾತೀತವಾಗಿ ಎಲ್ಲಾ ಭಾರತೀಯರನ್ನೂ ಒಂದುಗೂಡಿಸಬಲ್ಲ ವ್ಯಕ್ತಿ ಎಂದರೆ ಅದು ಭಗವಾನ್ ಶ್ರೀರಾಮ ಮಾತ್ರ. ಹೀಗಾಗಿಯೇ ರಾಮಜನ್ಮ ಭೂಮಿ ಚಳವಳಿಯು ಶತಮಾನಗಳವರೆಗೆ ಮುಂದುವರಿಯಿತು ಎಂದೂ ಹೇಳಿದ್ದಾರೆ.
ಇದೇ ವೇಳೆ 'ಲವ್ ಜಿಹಾದ್' ಸಮಸ್ಯೆ ಕುರಿತು ಪ್ರಸ್ತಾಪಿಸಿ, 'ದೇಶದ ಧಾರ್ಮಿಕ ಜನಸಂಖ್ಯಾ ಸ್ವರೂಪವನ್ನು ಬದಲಿಸುವ ಬಹುದೊಡ್ಡ ಪಿತೂರಿಯಲ್ಲಿ 'ಲವ್ ಜಿಹಾದ್' ಕೂಡ ಒಂದು. 2009, 2011ರಲ್ಲಿ ಒಂದು ಹೈಕೋರ್ಟ್ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಕಾನೂನುಬಾಹಿರ ಮತಾಂತರದ ವಿರುದ್ಧ ಉತ್ತರ ಪ್ರದೇಶ ಸರ್ಕಾರವು ಕಠಿಣ ಕಾನೂನುಗಳನ್ನು ರೂಪಿಸಿದೆ. ಆದರೂ ಈ ವಿಚಾರವಾಗಿ ಇನ್ನೂ ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಜಾಗೃತಿಯ ಅಗತ್ಯವಿದೆ' ಎಂದಿದ್ದಾರೆ.
ಲ್ಯಾಂಡ್ ಜಿಹಾದ್ ಕೃತ್ಯಗಳಿಗೆ ಕಡಿವಾಣ ಹಾಕಬೇಕು, ದೇಶಭ್ರಷ್ಟರಿಗೆ ಭಾರತ ನಿರಾಶ್ರಿತ ತಾಣ ಆಗಬಾರದು ಎಂದೂ ಅವರು ಹೇಳಿದ್ದಾರೆ.

