ಚೆನ್ನೈ: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಕೈಗೆತ್ತಿಕೊಂಡಿರುವ ಕರೂರು ಕಾಲ್ತುಳಿತ ಪ್ರಕರಣದ ತನಿಖೆಯಿಂದ ಪಾರಾಗುವುದಕ್ಕಾಗಿ ದೆಹಲಿಗೆ ಹೋಗಿದ್ರಾ? ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್ ಅವರನ್ನು ಶನಿವಾರ ಕೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜೂನ್ 11ರಂದು ನಡೆದ ನೀತಿ ಆಯೋಗ ಸಭೆಯಲ್ಲಿ ವಿಜಯ್ ಅವರು ಪಾಲ್ಗೊಂಡಿದ್ದನ್ನು ಉಲ್ಲೇಖಿಸಿ ಸ್ಟಾಲಿನ್ ಮಾತನಾಡಿದ್ದಾರೆ. ಡಿಎಂಕೆ ಸರ್ಕಾರವು ತಮಿಳುನಾಡಿಗಾಗಿ ಕೇಂದ್ರ ಸರ್ಕಾರದ ಎದುರು ಇಟ್ಟಿದ್ದ ಬೇಡಿಕೆಗಳನ್ನೇ ಮುಖ್ಯಮಂತ್ರಿಯವರು ಸಭೆಯಲ್ಲಿ ಪುನರುಚ್ಚರಿಸಿದ್ದಾರೆ ಎಂದಿದ್ದಾರೆ.
ಪಕ್ಷದ ಮಹಿಳಾ ಘಟಕದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, ʼಮುಖ್ಯಮಂತ್ರಿ ವಿಜಯ್ ಏನು ಮಾಡುತ್ತಿದ್ದಾರೆ ಎನ್ನುವುದು ನಿಮಗೆಲ್ಲ ಗೊತೇ ಇದೆ. ತಮಿಳುನಾಡಿನ ಹಕ್ಕುಗಳಿಗಾಗಿ ಡಿಎಂಕೆ ಸರ್ಕಾರವು ಇಟ್ಟಿದ್ದ ಬೇಡಿಕೆಗಳು ಮತ್ತು ನಮ್ಮ ಆಡಳಿತದ ಸಾಧನೆಗಳ ಬಗ್ಗೆ ವಿಜಯ್ ಮಾತನಾಡಿದ್ದಾರೆ. ನಾವು ಅದನ್ನು ಸ್ವಾಗತಿಸುತ್ತೇವೆʼ ಎಂದಿದ್ದಾರೆ.
ʼಬಿಜೆಪಿಯನ್ನು ವಿರೋಧಿಸಿದರೆ ಸಂಕಷ್ಟʼ
ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ), 2025ರ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಆ ವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪ್ರಕರಣದ ತನಿಖೆಗೆ ಆಗಿನ ಡಿಎಂಕೆ ಸರ್ಕಾರ ಎಸ್ಐಟಿ ರಚಿಸಿತ್ತು. ನಂತರದ ದಿನಗಳಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.
ಇದನ್ನು ಉಲ್ಲೇಖಿಸಿರುವ ಸ್ಟಾಲಿನ್, ʼಮಾನ್ಯ ಮುಖ್ಯಮಂತ್ರಿಯವರೇ, ನೀವು ಕರೂರು ಸಿಬಿಐ ಪ್ರಕರಣದಿಂದ ಪಾರಾಗುವುದಕ್ಕಾಗಿ ದೆಹಲಿಗೆ ಹೋಗಿದ್ದೀರಾ? ಬಿಜೆಪಿಯನ್ನು ಬಲವಾಗಿ ವಿರೋಧಿಸಿದರೆ, ನಿಮ್ಮ ಸರ್ಕಾರ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಹೆದರುತ್ತಿದ್ದೀರಾ?ʼ ಎಂದು ಕೇಳಿದ್ದಾರೆ.
ಈ ಹಿಂದೆ ಸ್ಟಾಲಿನ್ ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಿ ಆರೋಪ ಮಾಡಿದ್ದ ವಿಜಯ್, ಬಿಜೆಪಿಯೊಂದಿಗೆ ಡಿಎಂಕೆ ರಹಸ್ಯ ಮಾತುಕತೆ ನಡೆಸಿದೆ ಎಂದು ದೂರಿದ್ದರು. ಅದನ್ನೂ ನೆನಪಿಸಿಕೊಂಡಿರುವ ಸ್ಟಾಲಿನ್, ಅಧಿಕೃತ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ತಾವು ಆ ರೀತಿಯ ಆರೋಪಗಳನ್ನು ಮಾಡುವುದಿಲ್ಲ ಎಂದಿದ್ದಾರೆ.
ʼಡಿಎಂಕೆ ಸರ್ಕಾರವು ಕೇಂದ್ರದ ತ್ರಿಭಾಷಾ ನೀತಿ ವಿರುದ್ಧ ತೀವ್ರ ಹೋರಾಟ ನಡೆಸಿದ್ದ ವೇಳೆ ವಿಜಯ್ ಅಪಹಾಸ ಮಾಡಿದ್ದರು. ಆದರೆ, ಇಂದು ಅವರು ಮಾಡುತ್ತಿರುವುದೇನು?ʼ ಎಂದು ಕೇಳಿದ್ದಾರೆ.

