ನವದೆಹಲಿ: ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಟಿಎಂಸಿ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸುಖೇಂದು ರೇ ತಮ್ಮ ರಾಜ್ಯಸಭಾ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಎರಡಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಮಮತಾ ಬ್ಯಾನರ್ಜಿಗೆ ರಾಜೀನಾಮೆ ಪತ್ರ ಬರೆದಿರುವ ಸುಖೇಂದು ರೇ, "ಪಶ್ಚಿಮ ಬಂಗಾಳದ ಜನತೆ ಟಿಎಂಸಿಯ ನಿರಂತರ ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶಿಕ್ಷಣ, ಆರೋಗ್ಯ ಸೇವೆ, ಉದ್ಯಮ, ಉದ್ಯೋಗ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ವೈಫಲ್ಯ ಮತ್ತು ತೀವ್ರ ಅರಾಜಕತೆಯನ್ನು ತಿರಸ್ಕರಿಸಿದ್ದಾರೆ" ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿಯನ್ನು ಶ್ಲಾಘಿಸಿರುವ ಸುಖೇಂದು ರೇ, "ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಜನತೆ ಬಿಜೆಪಿಗೆ ಭಾರಿ ಗೆಲುವು ನೀಡಿದ್ದಾರೆ. ನೂತನವಾಗಿ ಚುನಾಯಿತವಾಗಿರುವ ಸರಕಾರ ತನ್ನ ಚುನಾವಣಾ ಭರವಸೆಯನ್ವಯ ಪಶ್ಚಿಮ ಬಂಗಾಳದ ಒಟ್ಟಾರೆ ಅಭಿವೃದ್ಧಿ ಮತ್ತು ಮರು ನಿರ್ಮಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕೆಲಸವನ್ನು ಪ್ರಾರಂಭಿಸಿದೆ" ಎಂದು ಉಲ್ಲೇಖಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪರಾಭವಗೊಂಡ ಬಳಿಕ, ಪಕ್ಷವು ಎರಡು ಬಣಗಳಾಗಿ ಇಬ್ಭಾಗವಾಗಿತ್ತು. 80 ಶಾಸಕರ ಪೈಕಿ 61 ಶಾಸಕರ ಬೆಂಬಲ ಹೊಂದಿದ್ದ ರಿತಬ್ರತಾ ಬ್ಯಾನರ್ಜಿ, ವಿಧಾನಸಭೆಯ ವಿಪಕ್ಷ ನಾಯಕರಾಗಿ ಚುನಾಯಿತರಾಗಿದ್ದರು. ಇದೀಗ ಟಿಎಂಸಿಯ ಸಂಸದೀಯ ಸದಸ್ಯರೂ ವಿಭಜನೆಯ ಹಂತ ತಲುಪಿದ್ದು, ಸುಮಾರು 23 ಟಿಎಂಸಿ ಸಂಸದರು ಬಂಡಾಯ ರಿತಬ್ರತಾ ಬ್ಯಾಜರ್ಜಿ ಬಣದ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

