ಡೆಹ್ರಾಡೂನ್: 'ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಹಿತಾಸಕ್ತಿಗಳಿಗಿಂತ ಬಾಹ್ಯ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
'ಕೇಂದ್ರ ಸರ್ಕಾರವು ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದ್ದು, ಸಾಮಾಜಿಕ-ಆರ್ಥಿಕ ಭದ್ರತೆಗಳನ್ನು ವ್ಯವಸ್ಥಿತವಾಗಿ ಕೆಡವುತ್ತಿದೆ' ಎಂದು ಆರೋಪಿಸಿದ್ದಾರೆ.
'ಜನರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಪಕ್ಷ ರಚಿಸಿದ ಆರ್ಥಿಕ ಅಡಿಪಾಯವನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದ ಕೇಂದ್ರ ಸರ್ಕಾರವು ನಾಶಪಡಿಸಿದೆ. ತುರ್ತು ಪರಿಸ್ಥಿತಿಗಾಗಿ ಮನೆಯಲ್ಲಿ ಇರಿಸಿದ್ದ ಹಣವನ್ನು ನೋಟು ರದ್ಧತಿ ಕಸಿದುಕೊಂಡಿದೆ. ಜಿಎಸ್ಟಿ ದೇಶದಾದ್ಯಂತ ಸಣ್ಣ ವ್ಯವಹಾರಗಳಿಗೆ ಹಾನಿ ಮಾಡಿದೆ' ಎಂದು ಹೇಳಿದ್ದಾರೆ.
'ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಸಂವಿಧಾನ ಹೇಳುತ್ತದೆ. ಈ ರಾಜ್ಯದ ರಚನೆಗಾಗಿ ನೀವು ಅನೇಕ ತ್ಯಾಗಗಳನ್ನು ಮಾಡಿದ್ದೀರಿ. ಆದರೆ ವಿಷಾದವೆಂದರೆ ಉತ್ತರಾಖಂಡವನ್ನು ತನ್ನದೇ ಜನರು ನಿರ್ವಹಿಸುತ್ತಿಲ್ಲ. ದೆಹಲಿಯಿಂದ ರಿಮೋಟ್ ಕಂಟ್ರೋಲ್ ಮೂಲಕ ನಿರ್ವಹಿಸಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.
'ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಹೊರಗಿನವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಜನರಿಗೆ ಸಿಗಬೇಕಾದ ಪ್ರಯೋಜನಗಳನ್ನು ಕಸಿದುಕೊಳ್ಳುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.

