ಮುಳ್ಳೇರಿಯ: ನಾಟೆಕಲ್ಲು ಸನಿಹ ಮನೆ ವಠಾರದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಅಜ್ಞಾತ ಪ್ರಾಣಿ ಕಡಿದು ಕೊಂದುಹಾಕಿದೆ. ನಾಟೇಕಲ್ಲು ಬಳಿಯ ಜಾಲಮೂಲೆ ನಿವಾಸಿ ಲೀಲಾ ಎಂಬವರ ಸಾಕು ನಾಯಿ ಸಾವಿಗೀಡಾಗಿದೆ. ನಾಯಿಯನ್ನು ಕೊಂದು, ಮಾಂಸವನ್ನು ಅರ್ಧತಿಂದ ಸ್ಥಿತಿಯಲ್ಲಿ ಕಳೇಬರ ಕಂಡು ಬಂದಿದೆ. ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ನಾಯಿನಾಪತ್ತೆಯಾಗಿದ್ದು, ಅಲ್ಪದೂರ ಸಾವಿಗೀಡಾಗಿರುವುದು ಕಂಡು ಬಂದಿತ್ತು. ಚಿರತೆ ದಾಳಿ ನಡೆಸಿರಬೇಕೆಂದು ಸಂಶಯಿಸಲಾಗಿದೆ.
ಕಾರಡ್ಕ ಪಂಚಾಯಿತಿ ನಾಲ್ಕನೇ ವಾರ್ಡ್ ಜಯನಗರ ಪ್ರದೇಶದಲ್ಲಿ ಚಿರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಥಳಕ್ಕಾಗಮಿಸಿ ಚಿರತೆ ಸೆರೆಹಿಡಿಯಲು ಬೋನು ಇರಿಸಿರುವ ಮಧ್ಯೆ, ನಾಟೆಕಲ್ಲು ಪ್ರದೇಶದಲ್ಲಿ ಸಾಕು ನಾಯಿ ಬಲಿಯಾಗಿದೆ.
ಮನೆಯವರು ನೀಡಿದ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಭೇಟಿ ನೀಡಿದರು.

