ಮುಂಬೈ: ಅಹ್ಮದಾಬಾದ್ ನಲ್ಲಿ ಕಳೆದ ವರ್ಷ ನಡೆದ ಏರ್ಇಂಡಿಯಾ 171 ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿಯನ್ನು ಭಾರತೀಯ ಪೈಲಟ್ಗಳ ಒಕ್ಕೂಟ (ಎಫ್ಐಪಿ) ವಿರೋಧಿಸಿದೆ. ಎರಡೂ ಎಂಜಿನ್ ವಿಫಲವಾಗುವ ಮುನ್ನ ಎಲೆಕ್ಟ್ರಿಕಲ್ ವೈಫಲ್ಯದ ಬಗ್ಗೆ ಮಾಹಿತಿಗಳನ್ನು ಒಳಗೊಂಡಿರಬಹುದಾದ ಕಾಕ್ಪಿಟ್ ಎಚ್ಚರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಸಂಘ ಆಪಾದಿಸಿದೆ.
ತಾವು ನಡೆಸಿದ ಸ್ವತಂತ್ರ ಸಿಮಿಲೇಟರ್ ಪರೀಕ್ಷೆಗಳು ಸಾಂದರ್ಭಿಕ ಲೋಪಗಳನ್ನು ಬಹಿರಂಗಪಡಿಸಿದ್ದು, ತನಿಖಾ ವರದಿಯ ಅಂಶಗಳನ್ನು ಅಲ್ಲಗಳೆದಿದೆ ಎಂದು ಸಂಘ ಹೇಳಿದೆ. ಈ ಸಂಬಂಧ ಎಫ್ಐಪಿ ಸರ್ಕಾರಕ್ಕೆ ಪತ್ರ ಬರೆದಿದ್ದು, 2025ರ ಜೂನ್ 12ರ ದುರಂತದ ಬಗ್ಗೆ ಅಂತಿಮ ವರದಿ ಬಿಡುಗಡೆ ಮಾಡುವ ಮುನ್ನ ಎಎಐಬಿ ಸಿಮ್ಯುಲೇಟರ್ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಫ್ಐಪಿ ಅಧ್ಯಕ್ಷ ಕ್ಯಾಪ್ಟನ್ ಸಿ.ರಾಂಡ್ವಾ, "ಫೆಡರೇಷನ್ ಹಿಂದಿನಿಂದ ಪ್ರತಿಪಾದಿಸುತ್ತಾ ಬಂದಂತೆ ಎಲೆಕ್ಟ್ರಿಕಲ್ ವೈಫಲ್ಯ ಎಚ್ಚರಿಕೆಯ ಸಂದೇಶ, ಧ್ವನಿಸಂದೇಶದ ಎಚ್ಚರಿಕೆಯನ್ನು ನೀಡಿದ್ದು, ಇದು ಕಾಕ್ಪಿಟ್ ನ ಧ್ವನಿ ಮುದ್ರಕಕದಲ್ಲಿ ದಾಖಲಾಗಿರಬಹುದು" ಎಂದು ಹೇಳಿದರು. ಪ್ರಾಥಮಿಕ ವರದಿ ಈ ಎಚ್ಚರಿಕೆ ಸಂದೇಶಗಳ ಸರಣಿಯನ್ನು ಬಿಡುಗಡೆ ಮಾಡಿಲ್ಲ ಎಂದು ಅವರು ಆಪಾದಿಸಿದರು.
ವಿಮಾನದ ಟೈಲ್ ಭಾಗ ಸರಿಯಾಗಿದ್ದರೂ ಈ ಪ್ರದೇಶದಲ್ಲಿ ಅಳವಡಿಸಿದ್ದ ವಿಮಾನದ ಡಾಟಾ ರೆಕಾರ್ಡರ್ ಏಕೆ ಹಾನಿಗೀಡಾಗಿದೆ ಎಂದು ಪ್ರಶ್ನಿಸಿದರು. ಈ ರೆಕಾರ್ಡರ್ ವಿದ್ಯುತ್ ನಿಂದ ಚಾಲಿತವಾಗಿದ್ದು, ಇದು ಹಾನಿಗೀಡಾಗಿರುವುದು ವಿದ್ಯುತ್ ಸಂಪರ್ಕ ಹಾಳಾಗಿರುವುದನ್ನು ಸೂಚಿಸುತ್ತದೆ ಎಂದು ಪ್ರತಿಪಾದಿಸಿದರು.

