G7 ಶೃಂಗಸಭೆಯ ಸಂದರ್ಭದಲ್ಲಿ ಫ್ರಾನ್ಸ್ನ ಎವಿಯನ್ನಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು ಎಂದು ತರೂರ್ ಶುಕ್ರವಾರ ಹೇಳಿದ್ದಾರೆ.
'ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಸಾರ್ವಜನಿಕ ಹಾಗೂ ಖಾಸಗಿ ಮಾತುಕತೆಗಳಲ್ಲಿ ಪ್ರಧಾನಿ ಮೋದಿ ಭಾರತದ ಕಳವಳವನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ. ಯುದ್ಧದ ಸಮಯದಲ್ಲಿ ವಾಣಿಜ್ಯ ಹಡಗುಗಳಲ್ಲಿರುವ ನಾಗರಿಕ ನಾವಿಕರನ್ನು ಗುರಿಯಾಗಿಸಬಾರದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಅವರು ಸೈನಿಕರಲ್ಲ' ಎಂದು ತರೂರ್ ಹೇಳಿದ್ದಾರೆ.
'ಭಾರತೀಯ ಧ್ವಜ ಹೊಂದಿರುವ ಹಡಗುಗಳು ಸೇರಿದಂತೆ ಅನೇಕ ಹಡಗುಗಳಲ್ಲಿ ಭಾರತೀಯ ನಾವಿಕರು ಸೇವೆ ಸಲ್ಲಿಸುತ್ತಿದ್ದಾರೆ. ಯಾವುದಾದರೂ ಹಡಗು ದಿಗ್ಬಂಧನ ಉಲ್ಲಂಘಿಸುತ್ತಿದೆ ಎಂದು ಭಾವಿಸಿದರೆ ಅದನ್ನು ತಡೆಯಲು ಬೇರೆ ಮಾರ್ಗಗಳನ್ನು ಬಳಸಬಹುದು. ಆದರೆ ಜನರನ್ನು ಕೊಲ್ಲಬಾರದು ಎಂಬುದೇ ಭಾರತದ ನಿಲುವು' ಎಂದು ಅವರು ಹೇಳಿದ್ದಾರೆ.
ಒಮಾನ್ ಕೊಲ್ಲಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಬುಧವಾರ ಪ್ರಧಾನಿ ಮೋದಿ ಅವರನ್ನು ಟೀಕಿಸಿತ್ತು. ಟ್ರಂಪ್ ಅವರೊಂದಿಗಿನ ಭೇಟಿಯಲ್ಲಿ ಪ್ರಧಾನಿ ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿಲ್ಲ ಎಂದು ಆರೋಪಿಸಿತ್ತು.
ಅಲ್ಲದೆ, ಘಟನೆಯ ಕುರಿತು ಅಮೆರಿಕದಿಂದ ಕ್ಷಮೆಯಾಚನೆ ಅಥವಾ ವಿಷಾದ ವ್ಯಕ್ತಪಡಿಸುವಂತೆ ಭಾರತ ಏಕೆ ಒತ್ತಾಯಿಸಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ತರೂರ್ ಅವರ ಹೇಳಿಕೆಗಳು ಕಾಂಗ್ರೆಸ್ನ ಆರೋಪಗಳಿಗೆ ವಿರುದ್ಧವಾಗಿವೆ ಎಂದು ಹೇಳಿದೆ.
'ಶಶಿ ತರೂರ್ ಅವರು ರಾಹುಲ್ ಗಾಂಧಿಯನ್ನು ಬಯಲು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆಯನ್ನು ಬಹಿರಂಗವಾಗಿ ಹೊಗಳುತ್ತಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಯ ವಿಚಾರದಲ್ಲಿ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡುವ ವಿಚಾರದಲ್ಲಿ ರಾಹುಲ್ ಗಾಂಧಿ ಎಲ್ಲರನ್ನೂ ಮೀರಿಸುತ್ತಾರೆ' ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಟ್ರಂಪ್ ಅವರು G7 ಶೃಂಗಸಭೆಯ ವೇಳೆ ಸುಮಾರು 16 ತಿಂಗಳ ಬಳಿಕ ಮೊದಲ ಬಾರಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದರು. ಹಾರ್ಮುಝ್ ಜಲಸಂಧಿ ಸೇರಿದಂತೆ ಗಲ್ಫ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನಾವಿಕರ ಸುರಕ್ಷತೆ ಕುರಿತು ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದರು.
'ಲಕ್ಷಾಂತರ ಭಾರತೀಯರು ಸಮುದ್ರಯಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆ ಭಾರತಕ್ಕೆ ಪ್ರಮುಖ ಆದ್ಯತೆಯಾಗಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದರು.
ಇದೇ ವೇಳೆ, ಟ್ರಂಪ್ ಅವರು ಪ್ರಧಾನಿ ಮೋದಿ ಅವರನ್ನು 'ಸುಂದರ ವ್ಯಕ್ತಿ' ಹಾಗೂ 'ಕಠಿಣ ಸಂಧಾನಕಾರ' ಎಂದು ಬಣ್ಣಿಸಿರುವುದಾಗಿ ವರದಿಯಾಗಿದೆ.

