ಹೈದರಾಬಾದ್: 'ಕೆರೆ, ನಾಲೆ ಒತ್ತುವರಿ ತೆರವಿಗೆ ರಚಿಸಿರುವ 'ಹೈಡ್ರಾ' ಸಮಿತಿಗೆ ಆ ಹೆಸರು ಇಡಲು ಸರ್ವಾಧಿಕಾರಿ ಹಿಟ್ಲರ್ ಸ್ಫೂರ್ತಿ' ಎಂಬ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ಹೇಳಿಕೆಯು ಈಗ ರಾಜಕೀಯ ವಿವಾದಕ್ಕೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡುವಾಗ ರೇವಂತ್ ರೆಡ್ಡಿ ಅವರು ಈ ಹೇಳಿಕೆ ನೀಡಿದ್ದರು.
ಬಿಆರ್ಎಸ್ ಮತ್ತು ಬಿಜೆಪಿ ಈ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿವೆ.
'ಬಡವರು ಕೆರೆ ಮತ್ತು ನಾಲೆ ಒತ್ತುವರಿ ಮಾಡುತ್ತಾರೆ; ಅದು ನನಗೆ ಅರ್ಥವಾಗುತ್ತದೆ. ಆದರೆ ಈಚಿನ ದಿನಗಳಲ್ಲಿ ಶ್ರೀಮಂತರು ತಮ್ಮ ಫಾರ್ಮ್ಹೌಸ್ಗಳಿಗಾಗಿ ಜಲಮೂಲಗಳನ್ನು ಒತ್ತುವರಿ ಮಾಡುತ್ತಿದ್ದು, ಕೊಳಚೆನೀರು ಜಲಮೂಲ ಸೇರುವಂತೆ ಮಾಡುತ್ತಿದ್ದಾರೆ. ಈ ಎಲ್ಲವನ್ನು ಗಮನಿಸಿಯೇ ನಾನು 'ಹೈಡ್ರಾ' ಸ್ಥಾಪಿಸಲು ನಿರ್ಧರಿಸಿದೆ' ಎಂದು ರೇವಂತ್ ರೆಡ್ಡಿ ಹೇಳಿದ್ದರು.
'ಹೈಡ್ರಾ ಎಂಬುದು ಹಿಟ್ಲರ್ನ ಪ್ರೀತಿಪಾತ್ರವಾದ ಪದ. ಯಾರನ್ನಾದರೂ ಹತ್ಯೆ ಮಾಡುವ ಆತನ ತಂಡವನ್ನು ಹೈಡ್ರಾ ಎಂದೇ ಕರೆಯಲಾಗುತ್ತಿತ್ತು. ನಾನು ಅದರಿಂದಲೇ ಸ್ಫೂರ್ತಿ ಪಡೆದು ಒತ್ತುವರಿ ತೆರವು ಕಾರ್ಯಾಚರಣೆಯ ತಂಡಕ್ಕೂ ಅದೇ ಹೆಸರಿಟ್ಟಿದ್ದೇನೆ' ಎಂದು ಹೇಳಿದ್ದರು.
ಈ ಹೇಳಿಕೆಗೆ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ, 'ಅಪಾಯಕಾರಿ ಹಿಟ್ಲರ್, ತುರ್ತು ಪರಿಸ್ಥಿತಿಯ ಮನಃಸ್ಥಿತಿ ಮತ್ತೆ ಬಯಲಿಗೆ ಬಂದಿದೆ' ಎಂದಿದ್ದಾರೆ. 'ಹೈದರಾಬಾದ್ನ ನೆಲಸಮ ಕಾರ್ಯಾಚರಣೆಯನ್ನು ಯುದ್ಧಬಾಧಿತ ಇಸ್ರೇಲ್ನ ಸ್ಥಿತಿಗೆ ಹೋಲಿಸುತ್ತಿದ್ದಾರೆ. ಇದು, ರಾಹುಲ್ ಗಾಂಧಿ ಅವರ ಧ್ವನಿಯನ್ನು ಅನುರಣಿಸುತ್ತಿದೆ' ಎಂದು ಟೀಕಿಸಿದ್ದಾರೆ.
ರೇವಂತ್ ರೆಡ್ಡಿ ಅವರು ಹೊಸ ಹಿಟ್ಲರ್ ಎಂದು ಟೀಕಿಸಿರುವ ಬಿಆರ್ಎಸ್ ಪಕ್ಷವು, ಲಕ್ಷಾಂತರ ಬಡ ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಆರೋಪಿಸಿದೆ.

