ನವದೆಹಲಿ: ಗೃಹ ಬಳಕೆ ಸಿಲಿಂಡರ್ ದರ ಏರಿಕೆ ಖಂಡಿಸಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಭಾನುವಾರ ತೀವ್ರ ವಾಗ್ದಾಳಿ ನಡೆಸಿದೆ. ಯುಪಿಎ ಅವಧಿಯಲ್ಲಿ ಹಣದುಬ್ಬರದ ಬಗ್ಗೆ ಊಳಿಡುತ್ತಿದ್ದ ಬಿಜೆಪಿಗರು ಈಗ ಏಕೆ ಸಿಲಿಂಡರ್ಗಳನ್ನು ಹಿಡಿದು ಬೀದಿಗಿಳಿದು ಪ್ರತಿಭಟಿಸುತ್ತಿಲ್ಲ ಎಂದೂ ಟೀಕಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದಕ್ಕೆ ಸಂಬಂಧಿಸಿದಂತೆ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದು, 'ಗೃಹಬಳಕೆ ಎಲ್ಪಿಜಿ ಸಿಲಿಂಡರ್ ದರ ಏರಿಕೆಯು ಸಾಮಾನ್ಯ ಜನರನ್ನು ಆತಂಕಕ್ಕೆ ದೂಡುತ್ತಿದೆ. ಮೋದಿ ಸರ್ಕಾರವು ಕಳೆದ ನಾಲ್ಕು ತಿಂಗಳಲ್ಲಿ ಸಿಲಿಂಡರ್ ಬೆಲೆಯನ್ನು ₹89ರಷ್ಟು ಹೆಚ್ಚಿಸಿದೆ' ಎಂದು ದೂರಿದ್ದಾರೆ.
'ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡಿರುವ ಕಾರಣ 41 ದೇಶಗಳ ಮೂಲಕ ಇಂಧನ ಮೂಲವನ್ನು ಕಂಡುಕೊಳ್ಳಲಾಗಿದೆ ಎಂದು ಸಂಸತ್ತಿನಲ್ಲಿ ಮೋದಿ ಹೇಳಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಎಲ್ಪಿಜಿ ಕೊರತೆ ಏಕೆ ಮುಂದುವರಿದಿದೆ' ಎಂದು ಪ್ರಶ್ನಿಸಿದ್ದಾರೆ.
'2025-26ರ ಅವಧಿಯಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ 5.56 ಕೋಟಿ ಕುಟುಂಬಗಳಿಗೆ ಒಂದು ಬಾರಿಯೂ ಸಿಲಿಂಡರ್ ರೀ ಫಿಲ್ಲಿಂಗ್ (ಮರುಪೂರಣ) ಸಿಕ್ಕಿಲ್ಲ. ಈ ಪೈಕಿ 3.30 ಕೋಟಿ ಕುಟುಂಬಗಳು ರೀ ಫಿಲ್ಲಿಂಗ್ ಆಯ್ಕೆಯನ್ನೂ ಮಾಡಿಲ್ಲ. ಪಶ್ಚಿಮ ಏಷ್ಯಾ ಬಿಕ್ಕಟ್ಟಿಗಿಂತ ಹಿಂದೆಯೇ ಈ ಪರಿಸ್ಥಿತಿ ಇತ್ತು. ಇದು ಮೋದಿ ಸರ್ಕಾರದ ಲಾಭಕೋರತನದ ಪರಿಣಾಮ ಅಲ್ಲವೇ?' ಎಂದೂ ಖರ್ಗೆ ಕೇಳಿದ್ದಾರೆ.
'ಕಳೆದ 12 ವರ್ಷದಲ್ಲಿ ಮೋದಿ ಸರ್ಕಾರವು ಗೃಹಬಳಕೆ ಎಲ್ಪಿಜಿ ಸಿಲಿಂಡರ್ ದರವನ್ನು ₹530 ರಷ್ಟು ಹೆಚ್ಚಿಸಿದರೂ ಬಿಜೆಪಿಯವರು ಏಕೆ ಮಾತನಾಡುತ್ತಿಲ್ಲ, ಪ್ರತಿಭಟಿಸುತ್ತಿಲ್ಲ' ಎಂದೂ ಅವರು ಪ್ರಶ್ನಿಸಿದ್ದಾರೆ.

