ನವದೆಹಲಿ: ಸಿಬಿಎಸ್ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ಜುಲೈ 1ರಿಂದ ತ್ರಿಭಾಷಾ ನೀತಿಯ ಕಡ್ಡಾಯ ಜಾರಿಯನ್ನು ತಡೆಹಿಡಿಯಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಪತ್ರ ಬರೆದಿದ್ದಾರೆ.
ಸೂಕ್ತ ಪಠ್ಯಪುಸ್ತಕಗಳು, ಶಿಕ್ಷಕರ ಲಭ್ಯತೆ ಹಾಗೂ ಸಿದ್ಧತೆಗಳಿಲ್ಲದೆ ಏಕಾಏಕಿ ತ್ರಿಭಾಷಾ ನೀತಿ ಜಾರಿ ಕಡ್ಡಾಯಗೊಳಿಸಿದರೆ ಅದು ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಅಡಚಣೆಗೆ ಕಾರಣವಾಗಲಿದೆ ಎಂದೂ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ, ಮಹಿಳೆಯರು ಮತ್ತು ಮಕ್ಕಳು, ಯುವಜನತೆ ಹಾಗೂ ಕ್ರೀಡೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿರುವ ಸಿಂಗ್, ಸಿಬಿಎಸ್ಇ 9ನೇ ತರಗತಿಯ ವಿದ್ಯಾರ್ಥಿಗಳ ಪೋಷಕರು ಕಳವಳ ವ್ಯಕ್ತಪಡಿಸಿ ತಮಗೆ ಸಲ್ಲಿಸಿರುವ ಮನವಿ ಪತ್ರಗಳ ಪ್ರತಿಯನ್ನು ಮೋದಿ ಅವರಿಗೂ ಕಳುಹಿಸಿದ್ದಾರೆ.
'ತ್ರಿಭಾಷಾ ನೀತಿ ವಿಚಾರವು ವಿಚಾರಣೆಯ ಹಂತದಲ್ಲಿದ್ದು, ಜುಲೈ 15ರಂದು ಇದಕ್ಕೆ ಸಂಬಂಧಿಸಿದ ತೀರ್ಪು ಹೊರಬೀಳಲಿದೆ. ಅದಕ್ಕೂ ಮುನ್ನವೇ ಜುಲೈ 1ರಂದು ನೀತಿ ಜಾರಿಗೊಳಿಸಲು ನಿರ್ಧರಿಸಿರುವುದು ಸರಿಯಲ್ಲ. ಈ ಎಲ್ಲಾ ವಿಚಾರಗಳನ್ನೂ ಪರಿಗಣಿಸಿ ನೀತಿ ಜಾರಿಯನ್ನು ತಡೆಹಿಡಿಯಬೇಕೆಂದು ನಾನು ಶಿಫಾರಸು ಮಾಡುತ್ತಿದ್ದೇನೆ' ಎಂದೂ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

