ಚೆನ್ನೈ: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ತಡೆಯುವ ಏಕೈಕ ಉದ್ದೇಶದಿಂದ ಸರ್ಕಾರ ರಚಿಸಲು ಟಿಎಂಕೆಗೆ ಬೆಂಬಲ ನೀಡಲು ಮಿತ್ರ ಪಕ್ಷಗಳಿಗೆ ಅನುವು ಮಾಡಿಕೊಟ್ಟೆವು ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥರೂ ಆಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ಡಿಎಂಕೆ ಸೇರಿದ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರನ್ನು ಇಲ್ಲಿ ನಡೆದ ಸಮಾರಂಭದಲ್ಲಿ ಸ್ವಾಗತಿಸಿದ ಅವರು, 'ಮಿತ್ರ ಪಕ್ಷಗಳು ಅವರ ಯೋಜನೆ ಬಗ್ಗೆ ನನಗೆ ತಿಳಿಸಿದಾಗ, ಅದು ನಿಮ್ಮ ಪ್ರಜಾಸತಾತ್ಮಕ ಹಕ್ಕು, ನಾನು ನಿಮ್ಮನ್ನು ತಡೆಯಲಾರೆ, ನೀವು ಹೋಗಬಹುದು ಎಂದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯಾಗುವುದನ್ನು ತಡೆಯಲು ಹಾಗೆ ಮಾಡಿದೆ. ಒಂದು ವೇಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗಿದ್ದರೆ, ಬಿಜೆಪಿಗೆ ಅಧಿಕಾರ ನಡೆಸಲು ಅವಕಾಶ ಸಿಗುತ್ತಿತ್ತು' ಎಂದು ಹೇಳಿದ್ದಾರೆ.
ನಮ್ಮೊಂದಿಗೆ ಮೈತ್ರಿ ಮಾಡಿಕೊಂಡು, ಡಿಎಂಕೆ ಅಧಿಕಾರಕ್ಕೆ ಬರಬೇಕು ಎಂದು ಗುರಿ ಇಟ್ಟುಕೊಂಡಿದ್ದ ಪಕ್ಷಗಳ ಬೆಂಬಲದಿಂದ ಇಂದು ಈ ಸರ್ಕಾರ ಕೆಲಸ ಮಾಡುತ್ತಿದೆ. ಸ್ಟಾಲಿನ್ ಅವರಿಗೆ ತಿಳಿಸಿಯೇ ಟಿವಿಕೆಗೆ ಬೆಂಬಲ ನೀಡಿದ್ದೇವೆ ಎಂದು ಹಲವು ಪಕ್ಷಗಳ ಮುಖಂಡರು ಈಗಾಗಲೇ ಹೇಳಿದ್ದಾರೆ. ನಮ್ಮ ಮಿತ್ರ ಪಕ್ಷಗಳ ಬೆಂಬಲದಿಂದ ಕೆಲಸ ಮಾಡುತ್ತಿರುವ ಈ ಸರ್ಕಾರವನ್ನು ಕೊನೆಗಾಣಿಸಬೇಕು ಎನ್ನುವ ಶಪಥದೊಂದಿಗೆ ಕೆಲಸ ಮಾಡೋಣ ಎಂದು ಅವರು ಕರೆ ನೀಡಿದರು.
ಸಾಮಾಜಿಕ ಮಾಧ್ಯಮ ಬಳಸಿ ಚುನಾವಣೆ ಗೆದ್ದ ಟಿವಿಕೆ: ಡಿಎಂಕೆ ಮುಖ್ಯಸ್ಥ ಸ್ಟಾಲಿನ್
'ಸೋಲು, ಗೆಲುವು ಸಹಜ. ಗೆಲುವಿನ ಉನ್ಮಾದದಿಂದ ಮೆರೆಯುವುದು ಅಥವಾ ಸೋಲಿನಿಂದ ಹತಾಶರಾಗುವುದು ಬೇಕಿಲ್ಲ. ಈ ಸನ್ನಿವೇಶದಲ್ಲಿ ನಮಗೆ ಗೆಲ್ಲಲು ಅವಕಾಶವಿದ್ದರೂ, ಅಧಿಕಾರ ಇಲ್ಲದೇ ಹೋದರೂ, ವಿರೋಧ ಪಕ್ಷವಾಗಿ ಜನರ ಸೇವೆ ಮಾಡುತ್ತೇವೆ' ಎಂದು ಹೇಳಿದ್ದಾರೆ.
ಈಚೆಗೆ ನಡೆದ ತಮಿಳುನಾಡು ಚುನಾವಣೆಯಲ್ಲಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳಲ್ಲಿ ಗೆದ್ದು, ಬಹುಮತಕ್ಕೆ 10 ಶಾಸಕರ ಕೊರತೆ ಎದುರಿಸಿತ್ತು. ಡಿಎಂಕೆ ಮಿತ್ರಪಕ್ಷಗಳಾದ ಸಿಪಿಐ, ಸಿಪಿಐಎಂ, ವಿಸಿಕೆ, ಮುಸ್ಲಿಂ ಲೀಗ್ ತಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಐದು ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಕೂಡ ಟಿವಿಕೆಗೆ ಬೆಂಬಲ ನೀಡಿತ್ತು.

