ಛತ್ರಪತಿ ಸಂಭಾಜಿನಗರ: 'ಕೇಂದ್ರ ಶಿಕ್ಷಣ ಸಚಿವ ಧರ್ಮಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಪರೀಕ್ಷೆ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧದ ನಮ್ಮ ಹೋರಾಟ ನಿಲ್ಲುವುದಿಲ್ಲ' ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದೀಪ್ಕೆ, 'ಶನಿವಾರ ದೆಹಲಿಯ ಜಂತರ್ ಮಂತರ್ನಲ್ಲಿ ಆಯೋಜಿಸಿರುವ ಪ್ರತಿಭಟನೆ ಬಹುತೇಕ ಯಶಸ್ವಿಯಾಗಿದೆ. ಸುಮಾರು 7,000 ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಈ ಅಂದೋಲನವು ರಾಷ್ಟ್ರವ್ಯಾಪಿ ಹರಡಲಿದೆ' ಎಂದು ಹೇಳಿದ್ದಾರೆ.
ನೀಟ್, ಸಿಬಿಎಸ್ಇ, ಸಿಯುಇಟಿ, ಎಸ್ಎಸ್ಸಿ ಸೇರಿದಂತೆ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ಹೊಣೆಗಾರಿಕೆಯನ್ನು ಹೊತ್ತುಕೊಂಡು ಕೇಂದ್ರ ಸಚಿವ ಧರ್ಮಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಲಾಗಿದೆ.
ಭಾನುವಾರ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ತಮ್ಮ ನಿವಾಸಕ್ಕೆ ತಲುಪಿದ ದೀಪ್ಕೆ ಅವರನ್ನು ಕುಟುಂಬ ಸದಸ್ಯರು ಸ್ವಾಗತಿಸಿದರು. ಏತನ್ಮಧ್ಯೆ ದೀಪ್ಕೆ ಅವರ ನಿವಾಸದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಚಳವಳಿಯನ್ನು ರಾಷ್ಟ್ರವ್ಯಾಪಿಯಾಗಿ ಪಸರಿಸಲು ಮತ್ತಷ್ಟು ಕ್ರಿಯಾಯೋಜನೆ ರೂಪಿಸುತ್ತೇವೆ. ಅಲ್ಲದೆ ಪ್ರಧಾನ್ ಅವರ ರಾಜೀನಾಮೆಗಾಗಿ ಒಂದು ವಾರ ಕಾಯುವುದಾಗಿ ಹೇಳಿದ್ದಾರೆ.
ಪ್ರತಿಭಟನೆಗೆ ಕರೆ ನೀಡಿದ್ದ ದೀಪ್ಕೆ ಶನಿವಾರ ಬೆಳಿಗ್ಗೆ ಅಮೆರಿಕದಿಂದ ದೆಹಲಿಗೆ ಆಗಮಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಆತ್ಮಚರಿತ್ರೆಯ ಪುಸ್ತಕದ ಪ್ರತಿಯನ್ನು ಹಿಡಿದುಕೊಂಡು ವಿಮಾನನಿಲ್ದಾಣದಿಂದ ಹೊರಬಂದರು.
ಮೇ ತಿಂಗಳಲ್ಲಿ ಆನ್ಲೈನ್ನಲ್ಲಿ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿಯ ಅಭಿಯಾನ ಕೆಲವೇ ದಿನಗಳಲ್ಲಿ ಇನ್ಸ್ಟಾಗ್ರಾಮ್ನಲ್ಲಿ 22 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಗಳನ್ನು ಗಳಿಸಿತ್ತು.

