ನೀಟ್ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳ ವಿರುದ್ಧ ಸಿಜೆಪಿ ಶನಿವಾರ ಜಂತರ್ಮಂತರ್ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
''ದೇಶಾದ್ಯಂತ ಯುವಜನರು ಪ್ರತಿಭಟನೆಗೆ ಆಗಮಿಸಿದ್ದು, ನ್ಯಾಯ ದೊರೆಯುವ ತನಕ ಧರಣಿ ನಡೆಸಲು ಬಯಸಿದ್ದಾರೆ. ಪ್ರತಿಭಟನೆಯು ಶಾಂತಿಯುತವಾಗಲಿದೆ'' ಎಂದು ಅವರು ಹೇಳಿದರು. ಜಂತರ್ಮಂತರ್ನಲ್ಲಿ ಪ್ರತಿಭಟನೆಯನ್ನು ಮುಂದುವರಿಸಲು ಅನುಮತಿ ನೀಡುವಂತೆಯೂ ಅವರು ದಿಲ್ಲಿ ಪೊಲೀಸರನ್ನು ಆಗ್ರಹಿಸಿದರು.
''ಕೇಂದ್ರದೊಂದಿಗೆ ಮಾತುಕತೆಗೆ ಸಿಜೆಪಿ ತನ್ನ ಬಾಗಿಲನ್ನು ತೆರೆದಿಟ್ಟಿದೆ. ಆದರೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು'' ಎಂದು ಅವರು ಷರತ್ತು ವಿಧಿಸಿದ್ದಾರೆ.
ಶನಿವಾರ ಬೆಳಗ್ಗಿನಿಂದಲೇ ಪ್ರತಿಭಟನೆ ಆರಂಭಗೊಂಡಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು, ಪರೀಕ್ಷೆಯಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸಲು ಹಾಗೂ ಆಕಾಂಕ್ಷಿಗಳ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಕೇಂದ್ರದ ವೈಫಲ್ಯವನ್ನು ಖಂಡಿಸುವ ಘೋಷಣೆಗಳಿರುವ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರು.
ಸಿಜೆಪಿ ಬೆಂಬಲಿಗರು ಪ್ರತಿಭಟನೆಯ ವೇಳೆ ಊಟದ ತಟ್ಟೆ ಹಾಗೂ ಚಮಚಗಳನ್ನು ಬಡಿದು, 'ಧರ್ಮೇಂದ್ರ ಪ್ರಧಾನ್ ತೊಲಗಲಿ' ಎಂದು ಘೋಷಣೆಗಳನ್ನು ಕೂಗಿದರು.
ಪರೀಕ್ಷಾ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವು ಉತ್ತರದಾಯಿತ್ವ ವಹಿಸಿಕೊಳ್ಳಬೇಕೆಂಬ ಬೇಡಿಕೆಯನ್ನು ಪ್ರತಿಭಟನಕಾರರು ಪುನರುಚ್ಚರಿಸಿದರು.
ಕೇಂದ್ರ ಹೊಣೆ ಹೊರದಿದ್ದಲ್ಲಿ ಜೂ.27ರಿಂದ ಅನಿರ್ದಿಷ್ಟಾವಧಿ ನಿರಶನ: ವಾಂಗ್ಚುಕ್
ಕೋಕ್ರೋಚ್ ಜನತಾ ಪಕ್ಷ ಹೊಸದಿಲ್ಲಿಯ ಜಂತರ್ಮಂತರ್ನಲ್ಲಿ ಶನಿವಾರ ಆಯೋಜಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್, ಶಿಕ್ಷಣ ವ್ಯವಸ್ಥೆಯಲ್ಲಿ ನಡೆದಿರುವ ಅಕ್ರಮಗಳ ಹೊಣೆಯನ್ನು ಕೇಂದ್ರ ಸರ್ಕಾರವು ಜೂನ್ 27ರೊಳಗೆ ಹೊತ್ತುಕೊಳ್ಳದೆ ಇದ್ದಲ್ಲಿ ತಾನು ಅನಿರ್ದಿಷ್ಟಾವಧಿ ನಿರಶನ ಆರಂಭಿಸುವುದಾಗಿ ಹೇಳಿದ್ದಾರೆ.

