ನವದೆಹಲಿ: 'ಸಂವಿಧಾನ ಹತ್ಯಾ ದಿವಸ'ವನ್ನು ದಸರಾದ 'ರಾವಣ ದಹನ'ದಂತೆ ಪ್ರತಿ ವರ್ಷ ಸ್ಮರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಶುಕ್ರವಾರ ಕರೆ ನೀಡಿದ್ದಾರೆ.
ತುರ್ತು ಪರಿಸ್ಥಿತಿಯಂತಹ ಅನ್ಯಾಯ ಮತ್ತೆ ಮರುಕಳಿಸಲು ಈ ದೇಶದ ಜನರು ಎಂದಿಗೂ ಅವಕಾಶ ನೀಡುವುದಿಲ್ಲ ಎಂಬುದಕ್ಕೆ ಇದು ನೆನಪಿನ ಸಂಕೇತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ 'ಸಂವಿಧಾನ ಹತ್ಯಾ ದಿವಸ'ದ ಅಂಗವಾಗಿ ಬಿಜೆಪಿ ಆಯೋಜಿಸಿದ್ದ 'ತುರ್ತು ಪರಿಸ್ಥಿತಿಯ ಕರಾಳ ದಿನ' ಎಂಬ ವಿಚಾರಸಂಕೀರ್ಣದಲ್ಲಿ ಅವರು ಮಾತನಾಡಿದ್ದಾರೆ. 'ರಾವಣ ದಹನದಂತೆ, ಸಂವಿಧಾನ ಹತ್ಯಾ ದಿವಸ'ವನ್ನು ಪ್ರತಿ ವರ್ಷ ನೆನಪಿಸಿಕೊಳ್ಳಬೇಕು' ಎಂದಿದ್ದಾರೆ.
'ನಮ್ಮದು ಸಂವಿಧಾನದ ಪ್ರತಿಯನ್ನು ಜೇಬಿನಲ್ಲಿ ಇಟ್ಟುಕೊಂಡು 'ಲೋಕತಂತ್ರ ಕಿ ಹತ್ಯಾ ಹೋ ರಹಿ ಹೈ' ಎಂದು ಹೇಳುವವರ ಗುಲಾಮ ಪ್ರಜಾಪ್ರಭುತ್ವವಲ್ಲ. ಸಂವಿಧಾನ ಯಾರ ಜೇಬಿನಲ್ಲೂ ಇಲ್ಲ ಮತ್ತು ಪ್ರಜಾಪ್ರಭುತ್ವ ಯಾರ ಗುಲಾಮವೂ ಅಲ್ಲ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
'ಅತ್ಯಂತ ಕಷ್ಟದ ಸಮಯದಲ್ಲೂ ಜಯಪ್ರಕಾಶ್ ನಾರಾಯಣ್ ಮತ್ತು ಅಟಲ್ ಬಿಹಾರಿ ವಾಜಪೇಯಿಯಂತಹ ನಾಯಕರು ಧೈರ್ಯ ಕಳೆದುಕೊಳ್ಳಲಿಲ್ಲ ಮತ್ತು ಪ್ರಜಾಪ್ರಭುತ್ವದ ಮನೋಭಾವವನ್ನು ಜೀವಂತವಾಗಿಟ್ಟಿದ್ದರು' ಎಂದು ಗುಪ್ತಾ ಸ್ಮರಿಸಿದ್ದಾರೆ.
'ನಿಜವಾದ ನಾಯಕ ವೈಯಕ್ತಿಕ ಲಾಭ ಅಥವಾ ಅಧಿಕಾರಕ್ಕಾಗಿ ಕೆಲಸ ಮಾಡುವುದಿಲ್ಲ. ಬದಲಿಗೆ, ಜನರಿಗಾಗಿ ಕೆಲಸ ಮಾಡುತ್ತಾನೆ, ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾನೆ... ಸಂವಿಧಾನವನ್ನು ಎತ್ತಿ ಹಿಡಿಯುತ್ತಾನೆ' ಎಂದಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು 1975ರ ಜೂನ್ 25ರಿಂದ 1977 ಮಾರ್ಚ್ 21ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿತ್ತು.

