ಆ ವೈದ್ಯರಿಂದ ಪರೀಕ್ಷೆಗೆ ಒಳಗಾಗಿ ಗಂಭೀರ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಶೇ 50ರಷ್ಟು ರೋಗಿಗಳಿಗೆ ಅದರ ಅವಶ್ಯಕತೆಯೇ ಇರಲಿಲ್ಲ ಎಂಬುದು ತಿಳಿದುಬಂದಿದೆ.
ಸುಳ್ಳು ದಾಖಲೆ ಸೃಷ್ಟಿಸಿ ವಿಮೆ ಕ್ಲೇಮು, ರೋಗಿಗಳ ಶೋಷಣೆ ಮತ್ತು ಆರೋಗ್ಯಕರ ರೋಗಿಗಳಿಗೆ ಅನಗತ್ಯ ಶಸ್ತ್ರಚಿಕಿತ್ಸೆ ನಡೆಸಿರುವುದನ್ನು ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಪತ್ತೆ ಮಾಡಿದೆ.
ಅನಂತ್ ನಾಗ್ನ ಜಿಎಂಸಿಯ ಡಾ. ಸೈಯದ್ ಮಕ್ಬೂಲ್ ಎಂಬ ವೈದ್ಯ ಈ ಅಕ್ರಮಗಳ ರೂವಾರಿಯಾಗಿದ್ದು, ಭಾರೀ ಪ್ರಮಾಣದ ವಂಚನೆ ಮತ್ತು ಅಧಿಕೃತ ದಾಖಲೆಗಳನ್ನು ತಿರುಚಲಾಗಿದೆ ಎಂದು ವರದಿ ತಿಳಿಸಿದೆ.
ಈ ಪ್ರಕರಣವು 103 ಹೃದಯ ರೋಗಿಗಳನ್ನು ಒಳಗೊಂಡ ಪೇಸ್ಮೇಕರ್ ಇಂಪ್ಲಾಂಟೇಶನ್ ಹಗರಣದ ಸುತ್ತ ಸುತ್ತುತ್ತದೆ. ಈ ಶಸ್ತ್ರಚಿಕಿತ್ಸೆಗೆ ಒಳಗಾದ 55 ರೋಗಿಗಳಲ್ಲಿ 27 ಜನರ ಹೃದಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅಂತಹವರಿಗೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯಕೀಯವಾಗಿ ಯಾವುದೇ ಕಾರಣವಿಲ್ಲ ಎಂದು ತಜ್ಞರು ಕಂಡುಕೊಂಡಿದ್ದಾರೆ.
'ವಿಚಾರಣೆ ಬಾಕಿ ಇರುವ ಕಾರಣ, ಅನಂತನಾಗ್ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೃದ್ರೋಗ ತಜ್ಞ, ಅಸೋಸಿಯೇಟ್ ಪ್ರೊಫೆಸರ್ ಡಾ. ಸೈಯದ್ ಮಕ್ಬೂಲ್ ಅಹ್ಮದ್ ಶಾ ಅವರನ್ನು ಜಮ್ಮು ಮತ್ತು ಕಾಶ್ಮೀರ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ಕಾಯ್ದೆ, 1956ರ ನಿಯಮ 31 ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ'ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಆಯುಕ್ತ ಎಂ. ರಾಜು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಅಕ್ರಮದ ಸಂಬಂಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ತನಿಖೆಗೆ ಆದೆಶಿಸಲಾಗಿತ್ತು ಎಂದು ರಾಜ್ಯದ ಆರೋಗ್ಯ ಸಚಿವರಾದ ಸಾಕಿನಾ ಇಟೂ ತಿಳಿಸಿದ್ದಾರೆ.
ತಪ್ಪು ದಾಖಲೆ ಸೃಷ್ಟಿ, ವ್ಯವಸ್ಥಿತ ವಂಚನೆ, ರೋಗಿಗಳ ಶೋಷಣೆ, ಖಾಸಗಿ ಆಸ್ಪತ್ರೆಗಗಳ ಜೊತೆ ಹೊಂದಾಣಿಕೆ, ಅನಧಿಕೃತ ವೈದ್ಯಕೀಯ ಚಟುವಟಿಕೆಯ ಆರೋಪ ವೈದ್ಯರ ಮೇಲಿದೆ.

