ಕೊಚ್ಚಿ: ಸಿಎಂಆರ್ಎಲ್ ಕಂಪನಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ.ವೀಣಾ ಅವರು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಇಂದು (ಬುಧವಾರ) ಹಾಜರಾದರು.
ಬೆಳಿಗ್ಗೆ 10.30ರ ಸುಮಾರಿಗೆ ಅವರು ವಿಚಾರಣೆಗೆ ಹಾಜರಾದರು.
ಕಚೇರಿಯ ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ವೀಣಾ ಅವರಿಗೆ ಸೇರಿದ ಎಕ್ಸಾಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಮಾಹಿತಿ ತಂತ್ರಜ್ಞಾನ ಸಂಸ್ಥೆ )ಮತ್ತು ಸಿಎಂಆರ್ಎಲ್ (ಕೊಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್) ಕಂಪನಿಯ ನಡುವೆ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಈ ವಿಚಾರಣೆ ನಡೆಸುತ್ತಿದ್ದಾರೆ.
ಸಿಎಂಆರ್ಎಲ್ ಕಂಪನಿಯು ವೀಣಾ ಅವರಿಗೆ ಸೇರಿದ ಎಕ್ಸಾಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ಗೆ (ಮಾಹಿತಿ ತಂತ್ರಜ್ಞಾನ ಸಂಸ್ಥೆ ) ₹2.78 ಕೋಟಿ ಹಣ ಪಾವತಿಸಿದೆ. ಇದಕ್ಕೆ ಪ್ರತಿಯಾಗಿ ಯಾವುದೇ ಸೇವೆ ಪಡೆದಿಲ್ಲ ಎಂಬ ಆರೋಪ ಇದೆ.
ಜೂನ್ 12 ರಂದು ವಿಚಾರಣೆಗೆ ಹಾಜರಾಗುವಂತೆ ವೀಣಾ ಅವರಿಗೆ ಇ.ಡಿ ನೋಟಿಸ್ ನೀಡಿತ್ತು. ಆದರೆ, ಅನಾರೋಗ್ಯದ ಕಾರಣ ನೀಡಿದ್ದ ವೀಣಾ ಅವರು ಇ-ಮೇಲ್ ಮೂಲಕ ಮತ್ತಷ್ಟು ಕಾಲಾವಕಾಶ ಕೋರಿದ್ದರು.
ಸಿಎಂಆರ್ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕಾರ್ತಾ ಅವರ ಇಐಸಿಪಿಎಲ್ ಕಂಪನಿಯಿಂದಲೂ ವೀಣಾ ಅವರ ಐಟಿ ಸಂಸ್ಥೆಗೆ ₹50 ಲಕ್ಷ ಸಾಲ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡದಿದ್ದರೂ ಸಾಲ ನೀಡಿರುವ ಬಗ್ಗೆ ಇ.ಡಿ. ಅನುಮಾನ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಮ್ಆರ್ಎಲ್ ಸಂಸ್ಥಾಪಕ ಶಶಿಧರನ್ ಕರ್ತಾ ಅವರ ಮಗ ಮತ್ತು ಪತ್ನಿಯನ್ನು ಇಡಿ ವಿಚಾರಣೆ ನಡೆಸಿತ್ತು.
2025ರಲ್ಲಿ ಎರ್ನಾಕುಲಂ ನ್ಯಾಯಾಲಯದಲ್ಲಿ ದಾಖಲಾಗಿದ್ದ ದೂರು ಆಧರಿಸಿ ಪಿಎಂಎಲ್ಎ (ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ) ಅಡಿಯಲ್ಲಿ ಇ.ಡಿ. ಪ್ರಕರಣ ದಾಖಲಿಸಿತ್ತು.
2019ರಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆಯು(ಐಟಿ) ಸಿಎಂಆರ್ಎಲ್ ಕಂಪನಿ ಮೇಲೆ ದಾಳಿ ನಡೆಸಿ, ಸುಮಾರು ₹130 ಕೋಟಿ ಮೊತ್ತದ ಹಣಕಾಸು ಅಕ್ರಮ ಪತ್ತೆ ಮಾಡಿತ್ತು.

