ನವದೆಹಲಿ (PTI): 'ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್ಇ) 12ನೇ ತರಗತಿ ಮರುಮೌಲ್ಯಮಾಪನ ಪ್ರಕ್ರಿಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ದೇಶದ್ರೋಹಿ ಹಣೆಪಟ್ಟಿ ಕಟ್ಟಲಾಗಿದೆ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
12ನೇ ತರಗತಿ ವಿದ್ಯಾರ್ಥಿ ವೇದಾಂತ್ ಮತ್ತು ಅವರ ಸ್ನೇಹಿತ ರೊಂದಿಗೆ ಚರ್ಚಿಸಿದ ವಿಡಿಯೊವನ್ನು ತಮ್ಮ 'ಎಕ್ಸ್'ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, 'ವೇದಾಂತ್ ಮತ್ತು ಅವನ ಸ್ನೇಹಿತರು ಬುದ್ಧಿವಂತ, ಧೈರ್ಯಶಾಲಿ ಯುವ ಭಾರತೀಯ ರಾಗಿದ್ದು, ಅವರು ಸಿಬಿಎಸ್ಇ ಮತ್ತು ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಸರಳವಾದ ಪ್ರಶ್ನೆಗಳನ್ನು ಕೇಳಿದ್ದರು. ಆದರೆ, ಅವರಿಗೆ ಉತ್ತರಗಳ ಬದಲಿಗೆ ಅವಮಾನಗಳು ಸಿಕ್ಕವು' ಎಂದು ಬರೆದುಕೊಂಡಿದ್ದಾರೆ.
'ವಿದ್ಯಾರ್ಥಿಗಳು ಉಜ್ವಲ ಮತ್ತು ಸುರಕ್ಷಿತ ಭವಿಷ್ಯಕ್ಕೆ ಅರ್ಹರು. ಅವರು ಅದನ್ನು ಪಡೆಯುವಂತೆ ನಾವು ಖಚಿತ ಪಡಿಸಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.
'ವೇದಾಂತ್ ಮತ್ತು ಇತರ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹಾಗೂ ನ್ಯಾಯಸಮ್ಮತ ಕಾಳಜಿ ಬಗ್ಗೆ ಧ್ವನಿ ಎತ್ತಿದ ಕಾರಣಕ್ಕಾಗಿ, ಅವರಿಗೆ 'ಪಾಕಿಸ್ತಾನಿಗಳು' ಹಾಗೂ 'ರಹಸ್ಯ ಏಜೆಂಟರು' ಎಂಬ ಹಣೆಪಟ್ಟಿ ಕಟ್ಟಲಾಗಿದೆ' ಎಂದು ವ್ಯಂಗ್ಯವಾಡಿದ್ದಾರೆ.
'ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಗಳನ್ನು ಮಾತ್ರ ಕೇಳುತ್ತಿದ್ದಾರಷ್ಟೆ. ಆದರೆ, ಈಗ ಹಠಾತ್ತನೆ ಅವರನ್ನು ದೇಶದ್ರೋಹಿಗಳೆಂದು ಕರೆಯಲಾಗುತ್ತಿದೆ. ಸಮಸ್ಯೆಯನ್ನು ಪರಿಹರಿಸಬೇಕಾದರೆ ಮೊದಲು ಸಮಸ್ಯೆಯನ್ನು ಒಪ್ಪಿಕೊಳ್ಳಬೇಕು. ಆದರೆ, ಸಿಬಿಎಸ್ಇ ಹಾಗೂ ಕೇಂದ್ರ ಸರ್ಕಾರವು ಸಮಸ್ಯೆಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ. ಬಡ ಮಕ್ಕಳನ್ನು ದೂಷಿಸುತ್ತಾ 'ನೀವು ಗೂಢಚಾರರು, ಭಯೋತ್ಪಾದಕರು' ಎಂದು ಆರೋಪಿಸಲಾಗುತ್ತಿದೆ' ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
'ನಿಮ್ಮನ್ನೂ ಭಯೋತ್ಪಾದಕರು ಎಂದು ಕರೆಯಲಾಗಿದೆಯೇ ಹೇಳಿ' ಎಂದು ರಾಹುಲ್ ಗಾಂಧಿ ಅವರು ವೇದಾಂತ್ ಮತ್ತು ಇತರ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಸಂವಾದದ ವೇಳೆ, ಛಾಯಾಗ್ರಾಹಕನಿಗೆ ನಗುತ್ತಾ, 'ಅಣ್ಣಾ, ಈ ಭಯೋತ್ಪಾದಕರ ಮುಖಗಳನ್ನು ತೋರಿಸು' ಎಂದು ಹೇಳಿರುವ ದೃಶ್ಯ ವಿಡಿಯೊದಲ್ಲಿದೆ.
'ಮರುಮೌಲ್ಯಮಾಪನ ಪ್ರಕ್ರಿಯೆಯ ಅಡಿಯಲ್ಲಿ ಸಿಬಿಎಸ್ಇ ಅಪ್ಲೋಡ್ ಮಾಡಿದ ಭೌತಶಾಸ್ತ್ರದ ಉತ್ತರ ಪತ್ರಿಕೆ ನನ್ನದಲ್ಲ' ಎಂದು 12ನೇ ತರಗತಿ ವಿದ್ಯಾರ್ಥಿ ವೇದಾಂತ್ ಇತ್ತೀಚೆಗೆ 'ಎಕ್ಸ್'ನ ಪೋಸ್ಟ್ನಲ್ಲಿ ಆರೋಪಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಇದರಬೆನ್ನಲ್ಲೇ, ಇನ್ನೂ ಹಲವಾರು ವಿದ್ಯಾರ್ಥಿಗಳು ಇದೇ ರೀತಿಯ ದೂರುಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದರು.

