ಕುಂಬಳೆ: ದೇಶಮಂಗಲದ ಪವಿತ್ರ ಶ್ರೀ ಶಂಕರನಾರಾಯಣ-ಶ್ರೀ ಕುಟ್ಟಿಚಾತ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳ ಅಂಗವಾಗಿ ಸಿದ್ಧಪಡಿಸಲಾದ ವಿಜ್ಞಾಪನಾ ಪತ್ರವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಶ್ರೀಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಗಳು ಜೀರ್ಣೋದ್ಧಾರ ಕಾರ್ಯಗಳ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ತಮ್ಮ ಅನುಗ್ರಹ ಸಂದೇಶ ನೀಡಿ, ವಿಜ್ಞಾಪನಾ ಪತ್ರವು ಕೇವಲ ಭಕ್ತಬಾಂಧವರಲ್ಲಿ ನೆರವು ಕೋರುವ ಪತ್ರವಲ್ಲ, ಬದಲಾಗಿ ಜೀರ್ಣೋದ್ಧಾರ ಕಾರ್ಯಗಳು ಯಾವುದೇ ಅಡಚಣೆಯಿಲ್ಲದೆ ಅತ್ಯಂತ ಸುಗಮವಾಗಿ ಮತ್ತು ಶೀಘ್ರವಾಗಿ ನೆರವೇರಲೆಂದು ಶ್ರೀ ಶಂಕರನಾರಾಯಣ-ಶ್ರೀ ಕುಟ್ಟಿಚಾತ ದೇವರಲ್ಲಿ ಸಲ್ಲಿಸುವ ಭಕ್ತಿಪೂರ್ವಕ ವಿಜ್ಞಾಪನೆಯಾಗಿದೆ ಎಂದು ತಿಳಿಸಿದರು. ಸಂಪತ್ತನ್ನು ಕೇವಲ ಸಂಗ್ರಹಿಸಿಕೊಂಡು ಇಡುವುದರಿಂದ ಪ್ರಯೋಜನವಿಲ್ಲ. ಅದನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಿ ಪುಣ್ಯ ಸಂಪಾದಿಸಬೇಕು. ದಾನವನ್ನು ಪ್ರಚಾರಕ್ಕಾಗಿ ಅಥವಾ ಪ್ರತಿಷ್ಠೆಗಾಗಿ ಮಾಡುವುದಕ್ಕಿಂತ, ಭಗವಂತನಿಗೂ ದಾನ ಮಾಡಿದ ವ್ಯಕ್ತಿಗೂ ಮಾತ್ರ ತಿಳಿದಿರುವ ದಾನವೇ ಅತ್ಯುನ್ನತ ಮತ್ತು ಶ್ರೇಷ್ಠ ದಾನವಾಗಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರದ ತಂತ್ರಿವರ್ಯರು ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತ್ರ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಹಡ್ಕೋ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು ಅಧ್ಯಕ್ಷತೆ ವಹಿಸಿದ್ದರು. ಕಳೆದ ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಎಲ್ಲಂಗಳ ವಾಸುದೇವ ಹೊಳ್ಳ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಜಯರಾಮ ರೈ ಹಾಗೂ ಗಣೇಶ್ ಭಂಡಾರಿ ಮಾಯಿಪ್ಪಾಡಿ, ಬೆದ್ರಡ್ಕ ಪೂಮಾಣಿ-ಕಿನ್ನಿಮಾಣಿ ದೇವಸ್ಥಾನದ ಪ್ರತಿನಿಧಿ ಲಕ್ಷ್ಮಣ ನೊಂಡ ಕೋಟೆಕುಂಜ, ಪುತ್ತೂರು ಕೊಟ್ಯ ಶ್ರೀ ಧೂಮಾವತಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ಪೂಜಾರಿ ಹಾಗೂ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಅಧ್ಯಕ್ಷ ಶೀನ ಶೆಟ್ಟಿ ಕಜೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪರಮಪೂಜ್ಯ ಎಡನೀರು ಶ್ರೀಗಳು ಜೀರ್ಣೋದ್ಧಾರ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು. ಭಕ್ತಾದಿಗಳಿಂದ ಮುಷ್ಟಿಕಾಣಿಕೆ ಸಮರ್ಪಣೆ ನಡೆಯಿತು.
ಕುಮಾರಿ ಶರಣ್ಯ, ಕುಮಾರಿ ಸಾವಿತ್ರಿ ಹಾಗೂ ಕುಮಾರಿ ಧನಲಕ್ಷ್ಮಿ ಪ್ರಾರ್ಥನೆ ಹಾಡಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಅಡ್ಕ ಹಾಗೂ ಉಪಾಧ್ಯಕ್ಷ ಜಗದೀಶ್ ಆಚಾರ್ಯ ಕಂಬಾರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಸನ್ನ ಕಾರಂತ ವಂದಿಸಿದರು


.jpg)
.jpg)
