ಸ್ಕಾಟ್ಲೆಂಡ್: ಚೀನ ಭಾರತದ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾದ ಮಹರ್ಷಿ ಸುಶ್ರುತರ ಕಂಚಿನ ಪ್ರತಿಮೆಯನ್ನು ಸ್ಕಾಟ್ಲೆಂಡ್ನ ಎಡಿನ್ಬರ್ಗ್ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವಿಶ್ವವಿದ್ಯಾನಿಲಯದಲ್ಲಿ ಅನಾವರಣಗೊಳಿಸಲಾಗಿದೆ.
ಈ ಪ್ರತಿಮೆಯನ್ನು ಉದ್ಘಾಟಿಸಿರುವ ಸ್ಕಾಟ್ಲೆಂಡ್ನ ಭಾರತದ ಕಾನ್ಸುಲೆಟ್ ಜನರಲ್, 'ಇದು ಪ್ರಾಚೀನ ಭಾರತದ ವೈದ್ಯಕೀಯ ಪರಂಪರೆ ಮತ್ತು ವೈದ್ಯಕೀಯ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಭಾರತ ಹಾಗೂ ಸ್ಕಾಟ್ಲೆಂಡ್ ನಡುವಿನ ದೀರ್ಘಕಾಲೀನ ಸಂಪರ್ಕದ ಪ್ರತೀಕ' ಎಂದು ಬಣ್ಣಿಸಿದೆ.
ಮಹರ್ಷಿ ಸುಶ್ರುತರ ಕಂಚಿನ ಪ್ರತಿಮೆಯನ್ನು ತಮಿಳುನಾಡಿನ ತಿರುವಣ್ಣಾಮಲೈನ ಶಿಲ್ಪಿಯೊಬ್ಬರು ನಿರ್ಮಿಸಿದ್ದಾರೆ. ಪ್ರಾಧ್ಯಾಪಕ ಚಂದ್ರ ಚೆರುವು ಕುಟುಂಬವು ತಮ್ಮದೇ ಪ್ರತಿಷ್ಠಾನದ ಮೂಲಕ ಈ ಪ್ರತಿಮೆಯನ್ನು ನೀಡಿದೆ. ಫಸ್ಟ್ ಪೋಸ್ಟ್ ಸುದ್ದಿ ಮಾಧ್ಯಮದ ಪ್ರಕಾರ ಚಂದ್ರ ಚೆರುವು, ಯುನಿವರ್ಸಿಟಿ ಹಾಸ್ಪಿಟಲ್ಸ್ ಆಫ್ ನಾರ್ತ್ ಮಿಡ್ಲ್ಯಾಂಡ್ಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ಕಾಟ್ಲೆಂಡ್ನಲ್ಲಿರುವ ಭಾರತದ ಕಾನ್ಸುಲೆಟ್ ಜನರಲ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಮಾತ್ರವಲ್ಲದೆ, ಈ ಪ್ರತಿಮೆ ಭಾರತ ಮತ್ತು ಸ್ಕಾಟ್ಲೆಂಡ್ ನಡುವಿನ ವೈದ್ಯಕೀಯ ಸಂಬಂಧವನ್ನು ಎತ್ತಿಹಿಡಿಯಲಿದೆ. ಎಡಿನ್ಬರ್ಗ್ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವಿಶ್ವವಿದ್ಯಾನಿಲಯದ ಮತ್ತು ಚಂದ್ರ ಚೆರುವು ಅವರಿಗೆ ಧನ್ಯವಾದಗಳನ್ನು ತಿಳಿಸಿದೆ.
ಮಹರ್ಷಿ ಸುಶ್ರುತ ಯಾರು?
ಸುಶ್ರುತರನ್ನು ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯದ ಕ್ಷೇತ್ರದ ಪ್ರವರ್ತಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಶಸ್ತ್ರಚಿಕಿತ್ಸಾ ತಂತ್ರಗಳು, ವೈದ್ಯಕೀಯ ವಿಧಾನಗಳನ್ನು ವಿವರಿಸುವ ಸುಶ್ರುತ ಸಂಹಿತವನ್ನು ಬರೆದಿದ್ದಾರೆ. ಈ ಗ್ರಂಥದಲ್ಲಿ ಹಲವು ಚಿಕಿತ್ಸಾ ವಿಧಾನಗಳ ಕುರಿತು ವಿವರಿಸಲಾಗಿದೆ. ಈ ಗ್ರಂಥವು ಪ್ಲಾಸ್ಟಿಕ್ ಸರ್ಜರಿಯ ಆರಂಭಿಕ ದಾಖಲೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಭಾರತದವರಾದ ಮಹರ್ಷಿ ಸುಶ್ರುತರು ಕ್ರಿ.ಪೂ 600ರಲ್ಲಿ ಜೀವಿಸಿದ್ದರು. ಭಾರತದ ಪ್ರಾಚೀನ ನಗರಗಳಲ್ಲಿ ಒಂದಾಗಿದ್ದ ವಾರಾಣಸಿಯಲ್ಲಿ ವಾಸಿಸಿದ್ದರು ಎಂಬ ಉಲ್ಲೇಖಗಳಿವೆ.
ಐತಿಹಾಸಿಕ ಸ್ಥಳದಲ್ಲಿ ಸುಶ್ರುತರ ಪ್ರತಿಮೆ..
ಎಡಿನ್ಬರ್ಗ್ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವಿಶ್ವವಿದ್ಯಾಲಯವನ್ನು 1505ರಲ್ಲಿ ಸ್ಥಾಪಿಸಲಾಗಿತ್ತು. 1581 ರಿಂದ ಈವರೆಗಿನ ದಾಖಲೆಗಳು ಈ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿವೆ.

