ಮುಂಬೈ: ಸಂವಿಧಾನ ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಅಗತ್ಯವಿರುವ ಸಂಖ್ಯಾಬಲ ಪಡೆದುಕೊಳ್ಳುವ ಉದ್ದೇಶದಿಂದ ಬಿಜೆಪಿ ತಮ್ಮ ಪಕ್ಷದವರನ್ನು ಪಕ್ಷಾಂತರಕ್ಕೆ ಪ್ರಚೋದಿಸುತ್ತಿದೆ ಎಂದು ಶಿವಸೇನಾ (UBT) ನಾಯಕ ಆದಿತ್ಯ ಠಾಕ್ರೆ ಸೋಮವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದೇ ಇರುವ ಕಾರಣ ಅದು ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
'ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಾಯಿಸುವುದು ಅವರ ಗುರಿಯಾಗಿದೆ. ಅದಕ್ಕಾಗಿಯೇ ಅವರು ಇಂದು ನಮ್ಮ ಸಂಸದರು ಮತ್ತು ಶಾಸಕರನ್ನು ಸೆಳೆಯುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಅವರನ್ನು ತಡೆದು ಕೇವಲ 240 ಸೀಟುಗಳಿಗೆ ಸೀಮಿತಗೊಳಿಸಿದರು. ಆದರೆ, ಈಗ ಅವರು ಪಕ್ಷಗಳನ್ನು ಒಡೆಯುವ ಮೂಲಕ ಸಂವಿಧಾನ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಆದಿತ್ಯ ಠಾಕ್ರೆ ಹೇಳಿದರು.
ಬಂಡಾಯ ಸಂಸದರನ್ನು ತೀವ್ರವಾಗಿ ಟೀಕಿಸಿದ ಠಾಕ್ರೆ, ಅವರು ಮಹಾ ವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟದ ಸಾಮೂಹಿಕ ಪ್ರಯತ್ನದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ ಮತ್ತು ಮತದಾರರು ನೀಡಿದ ಜನಾದೇಶಕ್ಕೆ ಈಗ ದ್ರೋಹ ಬಗೆಯುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆದಿತ್ಯ ಠಾಕ್ರೆ, 'ಬಿಜೆಪಿ ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸಬಹುದು, ಹಿಂಸಾಚಾರ ನಡೆಸಬಹುದು, ಪ್ರಚಾರ ಮಾಡಬಹುದು. ಆದರೆ, ಒಂದು ವಿಷಯ ಮಾತ್ರ ಖಚಿತ. ಬಿಜೆಪಿಗೆ ಹೇಗೆ ಆಡಳಿತ ನಡೆಸಬೇಕೆಂದು ತಿಳಿದಿಲ್ಲ. ನಾವು ಇದನ್ನು ಮುಂಬೈನ ಬಿಎಂಸಿ ಮತ್ತು ಪುಣೆಯ ಪಿಎಂಸಿಗಳಲ್ಲಿ ನೋಡುತ್ತಿದ್ದೇವೆ' ಎಂದರು.
ಪಕ್ಷಾಂತರಗಳನ್ನು ಸುಲಭಗೊಳಿಸಲು ಸಾರ್ವಜನಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಜನರಿಗೆ ನೌಕರರ ಸಂಬಳ ಮತ್ತು ಕಲ್ಯಾಣ ಯೋಜನೆಗಳಿಗೆ ಹಣವಿಲ್ಲ. ಆದರೆ, ಸಂಸದರನ್ನು ಖರೀದಿಸಲು ಅವರ ಬಳಿ ಹಣವಿದೆ ಎಂದು ಅವರು ಪ್ರತಿಪಾದಿಸಿದರು.

