ಲಖನೌ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ಸಮರ್ಪಿಸಿರುವ ಕೋಟ್ಯಂತರ ರೂಪಾಯಿ ದೇಣಿಗೆ ಹಣ ನಾಪತ್ತೆಯಾಗಿದೆ ಎಂಬ ವರದಿಗಳು ಹೊರಬಂದಿದ್ದು, ಈ ವಿಷಯವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ತನಿಖೆಗೆ ಆದೇಶಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಭಾನುವಾರ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, 'ವಿಶ್ವದಾದ್ಯಂತ ಇರುವ ಶ್ರೀರಾಮನ ಭಕ್ತರಿಗೆ ಇದು ಅತ್ಯಂತ ಸೂಕ್ಷ್ಮ ಮತ್ತು ಆಘಾತಕಾರಿ ಸುದ್ದಿಯಾಗಿದೆ. ರಾಮ ಮಂದಿರಕ್ಕೆ ಬಂದಿರುವ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಇಡೀ ಬೆಳವಣಿಗೆಯು ಮಂದಿರ ಟ್ರಸ್ಟ್ಗೆ ತೀವ್ರ ಮುಜುಗರದ ಸಂಗತಿ' ಎಂದು ಬರೆದುಕೊಂಡಿದ್ದಾರೆ.
ಈ ಇಡೀ ಹಗರಣದ ವರದಿಗಳ ಬೆನ್ನಲ್ಲೇ ಮಂದಿರ ಟ್ರಸ್ಟ್ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಕಾಯ್ದುಕೊಂಡಿರುವ ಮೌನವನ್ನು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. 'ಈ ವಿಷಯದಲ್ಲಿ ಸರ್ಕಾರದ ಮೌನವು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಇದು ಸಾರ್ವಜನಿಕ ಹಿತಾಸಕ್ತಿ ಮತ್ತು ಭಕ್ತರ ಭಾವನೆಗಳಿಗೆ ಸಂಬಂಧಿಸಿದ ವಿಷಯವಾಗಿದ್ದರೂ, ಟ್ರಸ್ಟ್ನ ಯಾರೊಬ್ಬರೂ ಮುಂದೆ ಬಂದು ಸ್ಪಷ್ಟನೆ ನೀಡಲು ಸಿದ್ಧರಿಲ್ಲದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ' ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಈ ಕಳವು ಆರೋಪವು ಜಾಗತಿಕ ಸನಾತನ ಧರ್ಮದ ಜನರ ಆಳವಾದ ನಂಬಿಕೆಗೆ ಧಕ್ಕೆ ತಂದಿದೆ ಎಂದು ಹೇಳಿರುವ ಅಖಿಲೇಶ್ ಯಾದವ್, 'ವಿಶ್ವದಾದ್ಯಂತ ಇರುವ ಸನಾತನ ಸಮುದಾಯವು ಶ್ರೀರಾಮನ ಮೇಲೆ ಇಟ್ಟಿರುವ ಅಚಲವಾದ ಭಕ್ತಿ ಮತ್ತು ನಂಬಿಕೆಗೆ ಈ ವಿಷಯ ನೇರವಾಗಿ ಸಂಬಂಧಿಸಿದೆ. ಆದ್ದರಿಂದ, ಮಾನ್ಯ ನ್ಯಾಯಾಲಯವು ಈ ಹಗರಣದ ಕುರಿತು ಸ್ವಯಂಪ್ರೇರಿತವಾಗಿ ಗಮನಹರಿಸಿ ಸೂಕ್ತ ತನಿಖೆಗೆ ಆದೇಶಿಸಬೇಕು' ಎಂದು ಒತ್ತಾಯಿಸಿದ್ದಾರೆ.
ಅಖಿಲೇಶ್ ಯಾದವ್ ಅವರ ಈ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ರಾಮ ಮಂದಿರ ಟ್ರಸ್ಟ್ ಆಗಲಿ ಅಥವಾ ಉತ್ತರ ಪ್ರದೇಶ ಸರ್ಕಾರವಾಗಲಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

