ಬದಿಯಡ್ಕ: ಪ್ರಕೃತಿ ನಮಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಹಲಸು. ಒಂದು ಕಾಲದಲ್ಲಿ ಕೇವಲ ಹಳ್ಳಿಯ ಮನೆಗಳ ಹಿತ್ತಲಿಗೆ ಸೀಮಿತವಾಗಿದ್ದ ಹಲಸು, ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ.ಹೇಳಿದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಮಾಡೆಲ್ ಸಿ.ಡಿ.ಎಸ್ ವತಿಯಿಂದ ಸಿ.ಡಿ.ಎಸ್ ಹಾಲ್ನಲ್ಲಿ ಜರಗಿದ ಹಲಸಿನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿ ಪ್ರದರ್ಶಿಸಲಾಗಿರುವ ವಿಭಿನ್ನ ಹಲಸಿನ ಖಾದ್ಯಗಳು ನಮ್ಮ ಕುಟುಂಬಶ್ರೀ ಮಹಿಳೆಯರ ಅಡಿಗೆ ನೈಪುಣ್ಯತೆ ಮತ್ತು ಸೃಜನಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಕೇವಲ ಹಣ್ಣನ್ನು ತಿನ್ನುವುದಷ್ಟೇ ಅಲ್ಲದೆ, ಅದರಿಂದ ಮೌಲ್ಯರ್ವತ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮಹಿಳೆಯರು ಸ್ವಾವಲಂಬಿ ಉದ್ಯಮಿಗಳಾಗಲು ಈ ಮೇಳವು ಉತ್ತಮ ಪ್ರೇರಣೆಯಾಗಿದೆ ಎಂದರು.
ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಅದ್ಭುತ ಪ್ರದರ್ಶನವನ್ನು ಆಯೋಜಿಸಿದ ಬದಿಯಡ್ಕ ಸಿ.ಡಿ.ಎಸ್ ಪದಾಧಿಕಾರಿಗಳಿಗೆ, ಶ್ರಮಿಸಿದ ಎಲ್ಲಾ ಕುಟುಂಬಶ್ರೀ ಸಹೋದರಿಯರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಇದರೊಂದಿಗೆ ಇಂದು ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಸದಸ್ಯ ರಾಮಪ್ಪ ಮಂಜೇಶ್ವರ, ಕುಟುಂಬಶ್ರೀ ಜಿಲ್ಲಾ ಮಿಷನ್ನ ಡಿ.ಎಂ.ಸಿ ರತೀಶ್ ಭಾಗವಹಿಸಿದ್ದರು. ಎ.ಡಿ.ಎಂ.ಸಿ ಕಿಶೋರ್, ಎ.ಎಸ್.ಸಜಿ, ಕೃಷಿ ಅಧಿಕಾರಿಗಳಾದ ಬಿಂದು, ಮೋಹನನ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮನೋಜ್ ಕುಮಾರ್, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು, ವಾರ್ಡ್ ಸದಸ್ಯರು, ಸಿ.ಡಿ.ಎಸ್ ಸದಸ್ಯರು, ಉದ್ಯಮಿಗಳು ಹಾಗೂ ಕುಟುಂಬಶ್ರೀ ಸದಸ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕುಟುಂಬಶ್ರೀ ಸದಸ್ಯರ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ಸವದಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಿದ ಬರೋಬ್ಬರಿ 230 ವಿಭಿನ್ನ ಬಗೆಯ ತಿನಿಸುಗಳನ್ನು ಪ್ರದರ್ಶಿಸಲಾಯಿತು. ಸಿ.ಡಿ.ಎಸ್ ಅಧ್ಯಕ್ಷೆ ಸುಲೋಚನಾ ಸ್ವಾಗತಿಸಿ, ಉಪಾಧ್ಯಕ್ಷೆ ಜಯಂತಿ ಕುಂಟಿಕಾನ ವಂದಿಸಿದರು.

.jpg)
.jpg)
