ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅವಹೇಳನಕಾರಿ ಹಾಗೂ ಅಗೌರವಯುತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಬಿಜೆಪಿಯ ಆರು ರಾಜ್ಯಸಭಾ ಸದಸ್ಯರು ಅವರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.
ಈ ನೋಟಿಸ್ ಅನ್ನು ಹಕ್ಕುಚ್ಯುತಿ ಸಮಿತಿಗೆ ಶಿಫಾರಸು ಮಾಡಿರುವ ರಾಜ್ಯಸಭಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್, ಅದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಖರ್ಗೆ ಅವರ ಹೇಳಿಕೆಯು ಸಂಸತ್ತು ಹಾಗೂ ಅದರ ಸದಸ್ಯರ ಘನತೆಗೆ ಕುಂದುಂಟು ಮಾಡಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯಸಭಾ ಸದಸ್ಯರಾದ ಬೃಜ್ ಲಾಲ್, ಮಿಥಲೇಶ್ ಕುಮಾರ್, ಸಮಿತ್ರಾ ಬಾಲ್ಮೀಕಿ, ಶಿವೇಶ್ ಕುಮಾರ್, ಸಿಕಂದರ್ ಕುಮಾರ್ ಹಾಗೂ ನಾಗೇಂದ್ರ ರಾಯ್ ಅವರು ಜಂಟಿಯಾಗಿ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.
'ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಅವಹೇಳನಕಾರಿ ಮತ್ತು ಅಗೌರವಯುತ ಹೇಳಿಕೆ ನೀಡಿದ್ದಾರೆ. ಆ ಮೂಲಕ ಸಂಸತ್ತು ಹಾಗೂ ಅದರ ಸದಸ್ಯರ ಘನತೆಗೆ ಕುಂದುಂಟು ಮಾಡಿದ್ದಾರೆ' ಎಂದು ನೋಟಿಸ್ನಲ್ಲಿ ಆರೋಪಿಸಲಾಗಿದೆ.
ರಾಜ್ಯಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿಯ 188ನೇ ನಿಯಮದಡಿ ಈ ನೋಟಿಸ್ ಸಲ್ಲಿಸಲಾಗಿದೆ. 'ವಾಸ್ತವಾಂಶಗಳನ್ನು ಪರಿಗಣಿಸಿ, ರಾಜ್ಯಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿಯ 203ನೇ ನಿಯಮದಡಿ ವಿಷಯವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯಸಭಾಧ್ಯಕ್ಷರು ಈ ನೋಟಿಸ್ ಅನ್ನು ಹಕ್ಕುಚ್ಯುತಿ ಸಮಿತಿಗೆ ಶಿಫಾರಸು ಮಾಡಿದ್ದಾರೆ' ಎಂದು ರಾಜ್ಯಸಭಾ ಕಾರ್ಯಾಲಯ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ತಿಳಿಸಿದ್ದಾರೆ.
ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಹಕ್ಕುಚ್ಯುತಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಬಿಜೆಪಿ ಸದಸ್ಯರಾದ ಸುಧಾಂಶು ತ್ರಿವೇದಿ, ದೀಪಕ್ ಪ್ರಕಾಶ್, ಸುಮೇರ್ ಸಿಂಗ್ ಸೋಳಂಕಿ, ಸುರೇಂದ್ರ ಸಿಂಗ್ ನಗರ್, ಮನನ್ ಕುಮಾರ್ ಮಿಶ್ರಾ ಹಾಗೂ ಪಕ್ಷೇತರ ಸದಸ್ಯ ಕಾರ್ತಿಕೇಯ ಶರ್ಮಾ ಅವರು ಹಕ್ಕುಚ್ಯುತಿ ಸಮಿತಿಯ ಇತರ ಸದಸ್ಯರಾಗಿದ್ದಾರೆ.

