ನವದೆಹಲಿ: ಕಳೆದ ವರ್ಷದಿಂದ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿರುವುದರಿಂದ, ನದಿಯ ಒಂದೇ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ಹರಿಯದಂತೆ ನೋಡಿಕೊಳ್ಳಲು ಭಾರತವು ಪ್ರತಿಯೊಂದು ಪ್ರಯತ್ನವನ್ನು ಮಾಡುತ್ತಿದೆ ಎಂದು ಕೇಂದ್ರ ಜಲ ಸಂಪನ್ಮೂಲಗಳ ಸಚಿವ ಸಿ.ಆರ್. ಪಾಟೀಲ್ ಬುಧವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಗೃಹ ಸಚಿವ ಅಮಿತ್ ಶಾ ಅವರು ವೈಯಕ್ತಿಕವಾಗಿ ಇದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
''ಒಪ್ಪಂದ ಈಗಲೂ ಇದೆ. ಸದ್ಯ ಅದನ್ನು ಅಮಾನತಿನಲ್ಲಿಡಲಾಗಿದೆ. ಪ್ರಧಾನಿ ಮೋದಿ ಈ ನಿರ್ಧಾರವನ್ನು ತೆಗೆದುಕೊಂಡಾಗಿನಿಂದ, ಅಲ್ಲಿಗೆ ಒಂದು ಹನಿ ನೀರೂ ಹರಿಯದಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಧಾನಿಯವರ ನಿರ್ದೇಶನದ ಮೇರೆಗೆ ಗೃಹ ಸಚಿವ ಅಮಿತ್ ಶಾ ಕೂಡ ವೈಯಕ್ತಿಕವಾಗಿ ಈ ವಿಷಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಮತ್ತು ನಾವು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ'' ಎಂದು ಸಿಂಧೂ ಜಲ ಒಪ್ಪಂದ ಕುರಿತು ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಪಾಟೀಲ್ ಹೇಳಿದರು.
''ಕಾಮಗಾರಿಯು ಸಮಯ ಮಿತಿಯಲ್ಲಿ ಸಾಗುತ್ತಿದೆ ಎಂದು ನನಗೆ ಅನಿಸುತ್ತಿದೆ. ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನೀರು ನಿಲ್ಲುತ್ತದೆ ಎಂದು ನಾನು ಹೇಳಬಲ್ಲೆ. ಮುಂಬರುವ ವರ್ಷಗಳಲ್ಲಿ ಒಂದೇ ಒಂದು ಹನಿ ನೀರು ಕೂಡ ಅಲ್ಲಿಗೆ ಹೋಗುವುದಿಲ್ಲ ಎನ್ನುವುದು ಖಚಿತ. ಇಷ್ಟನ್ನು ನಾನು ನಿಮಗೆ ಹೇಳಬಲ್ಲೆ'' ಎಂದು ಸಚಿವರು ಹೇಳಿದರು.
ಕಳೆದ ವರ್ಷದ ಎಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯ ಬಳಿಕ, ಭಾರತವು ಪಾಕಿಸ್ತಾನದೊಂದಿಗಿನ ಈ ಒಪ್ಪಂದವನ್ನು ಅಮಾನತಿನಲ್ಲಿಟ್ಟಿತ್ತು. ಆ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದಾರೆ.
ಸಿಂಧೂ ಜಲ ಒಪ್ಪಂದವು, ಸಿಂಧೂ ನದಿ ಹಾಗೂ ಅದರ ಐದು ಉಪನದಿಗಳಾದ ಸಟ್ಲೆಜ್, ಬಿಯಾಸ್, ರಾವಿ, ಝೇಲಂ ಮತ್ತು ಚೀನಾಬ್ ನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದ ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದವಾಗಿದೆ.
ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ್ದ ಈ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಕೂಡ ಸಹಿ ಹಾಕಿದೆ. ಕಾಶ್ಮೀರದ ಮೇಲಿನ ಮೊದಲ ಯುದ್ಧದ ನಂತರ 9 ವರ್ಷಗಳಿಗೂ ಹೆಚ್ಚು ಕಾಲ ನಡೆದ ಮಾತುಕತೆಗಳ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

