ಪ್ರಸ್ತುತ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಮುಂದುವರಿದಿದೆ.
ಕಳೆದ ವರ್ಷದ ಜೂನ್ 24 ರಂದು ಬಿಹಾರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಾಯೋಗಿಕವಾಗಿ ಎಸ್ಐಆರ್ ಆರಂಭಗೊಂಡಿತ್ತು. ಚುನಾವಣಾ ಆಯೋಗವು ಬಿಜೆಪಿಯ ಸೂಚನೆಯಂತೆ ದಾಖಲೆಗಳ ಕೊರತೆಯ ನೆಪದಲ್ಲಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕಾರ್ಯ ನಿರ್ವಹಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳ ನಡುವೆಯೇ ಎಸ್ಐಆರ್ ಬಳಿಕ ರಾಜ್ಯದ ಮತದಾರರ ಪಟ್ಟಿಯಿಂದ ಸುಮಾರು 65 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿತ್ತು.
ಈ ವರ್ಷದ ಮಾರ್ಚ್ನಲ್ಲಿ ಸರ್ವೋಚ್ಚ ನ್ಯಾಯಾಲಯವು ಎಸ್ಐಆರ್ನ ಸಾಂವಿಧಾನಿಕ ಸಿಂಧುತ್ವವನ್ನು ಸರ್ವಾನುಮತದಿಂದ ಎತ್ತಿಹಿಡಿದಿದೆ.
ಪಶ್ಚಿಮ ಬಂಗಾಳ ಮತ್ತು ಬಿಹಾರಗಳಲ್ಲಿ ಎಸ್ಐಆರ್ ಸಂದರ್ಭದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವ ವ್ಯಕ್ತಿಗಳನ್ನು ಸರಕಾರದ ಕಲ್ಯಾಣ ಯೋಜನೆಗಳಿಂದ ಹೊರಗಿರಿಸಲಾಗಿದೆ.
ಎಸ್ಐಆರ್ ಈಗ ಎನ್ಸಿಇಆರ್ಟಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಭಾಗವಾಗಿದ್ದು,ಮತದಾರರ ಪಟ್ಟಿಗಳಿಂದ ಅರ್ಹ ನಾಗರಿಕರು ಹೊರಗುಳಿಯುವುದಿಲ್ಲ ಮತ್ತು ಅನರ್ಹ ವ್ಯಕ್ತಿಗಳು ಸೇರ್ಪಡೆಗೊಳ್ಳುವುದಿಲ್ಲ ಎನ್ನುವುದನ್ನು ಖಚಿತಪಡಿಸಲು ನಡೆಸಲಾಗುವ ಪ್ರಕ್ರಿಯೆ ಎಂದು ಎಸ್ಐಆರ್ ಅನ್ನು ಬಣ್ಣಿಸಲಾಗಿದೆ.
ಕಳೆದ ವರ್ಷ ಅ.27 ರಂದು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಛತ್ತೀಸ್ಗಢ, ಕೇರಳ ಸೇರಿದಂತೆ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದ ಎಸ್ಐಆರ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಒಟ್ಟು ಮತದಾರರ ಪಟ್ಟಿಗಳಲ್ಲಿ ಶೇ 10.2 ರಷ್ಟು ಹೆಸರುಗಳನ್ನು ಕೈಬಿಡಲಾಗಿದೆ. ಒಟ್ಟು ಮತದಾರರ ಸಂಖ್ಯೆ 50.99 ಕೋಟಿಯಿಂದ 45.81 ಕೋಟಿಗೆ (5.18 ಕೋಟಿ ಇಳಿಕೆ) ಇಳಿದಿದೆ.
ಮೊದಲ ಎರಡು ಹಂತಗಳ ಎಸ್ಐಆರ್ ಪ್ರಕ್ರಿಯೆಯಲ್ಲಿ 66,88,636 ಮೃತ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಈ ಪೈಕಿ ಉ.ಪ್ರದೇಶದಲ್ಲಿ ಗರಿಷ್ಠ 25.47 ಲಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ 24.16 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದಲ್ಲದೆ, ಆಕ್ಷೇಪಣೆಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಯ ನಂತರ ಇನ್ನೂ 63.16 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ.
ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ದಿಲ್ಲಿ ಮತ್ತು ಪಂಜಾಬ್ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೇ 14ರಿಂದ ಮೂರನೇ ಹಂತ ಪ್ರಾರಂಭವಾಗಿದ್ದು, ಇದರಲ್ಲಿ 36.73 ಕೋಟಿ ಮತದಾರರು ಸೇರಿದ್ದಾರೆ. ಇದು ಈ ವರ್ಷದ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ.

