ಇಂತಹ ಸುಳ್ಳು ಮಾಹಿತಿಗಳ ಮೂಲಕ ನ್ಯಾಯಾಂಗ ಸಂಸ್ಥೆಗಳಿಗೆ ಅಪಕೀರ್ತಿ ತರಲಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಸಂದೇಶಗಳು ಸುಳ್ಳು ಮತ್ತು ದುರುದ್ದೇಶಪೂರಿತವಾಗಿವೆ ಹಾಗೂ ನ್ಯಾಯಾಂಗ, ಕಾರ್ಯಾಂಗ ಮತ್ತು ಬ್ಯಾಡ್ಮಿಂಟನ್ ಕ್ರೀಡೆಗೆ ಹಾನಿ ಉಂಟುಮಾಡುವಂತಿವೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ರಜಾಕಾಲದ ಪೀಠವು ಶುಕ್ರವಾರ ಹೇಳಿದೆ.
''ಇಂತಹ ವಿಷಯಗಳ ನಿರಂತರ ಪ್ರಸಾರ ಮತ್ತು ಹರಡುವಿಕೆಯು ಈ ಸಂಸ್ಥೆಗಳ ಪ್ರತಿಷ್ಠೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದನ್ನು ತಕ್ಷಣವೇ ತಡೆಹಿಡಿಯದಿದ್ದರೆ, ನ್ಯಾಯದಾನ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಯೇ ನಶಿಸಿ ಹೋಗುವ ಸಾಧ್ಯತೆಯಿದೆ'' ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಹಿರಿಯ ನ್ಯಾಯಾಧೀಶರು ಮತ್ತು ಸಚಿವರನ್ನೊಳಗೊಂಡ ದೊಡ್ಡ ಭಾರತೀಯ ನಿಯೋಗವೊಂದು ಇಂಗ್ಲೆಂಡ್ ನಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿಯೊಂದರಲ್ಲಿ ಭಾಗವಹಿಸಿತ್ತು ಎಂದು ಹೇಳುವ ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ತೆಗೆದುಹಾಕುವಂತೆ ಕೋರಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (BAI) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ''ಸಂಪೂರ್ಣವಾಗಿ ಸುಳ್ಳು ಮತ್ತು ದಾರಿ ತಪ್ಪಿಸುವಂಥವು'' ಹಾಗೂ ಈ ಭೇಟಿಯ ಬಗ್ಗೆ ಕಾಲ್ಪನಿಕ ವ್ಯಾಖ್ಯಾನವೊಂದನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂಬುದಾಗಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಆಗ, ಇಂತಹ ಮಾಹಿತಿಗಳನ್ನು ಹರಡುವ ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ನ್ಯಾಯಮೂರ್ತಿ ಕರಿಯಾ ಹೇಳಿದರು.
ಈ ಸಂದೇಶಗಳು ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರು ಹಾಗೂ ಕೇಂದ್ರ ಸಚಿವರ ಘನತೆಗೆ ಧಕ್ಕೆ ತರುವ ಉದ್ದೇಶದ ವ್ಯವಸ್ಥಿತ ತಪ್ಪು ಮಾಹಿತಿ ಅಭಿಯಾನದ ಭಾಗವಾಗಿದೆ ಎಂದು ಶನಿವಾರ ಸಾರ್ವಜನಿಕಗೊಳಿಸಲಾದ ವಿವರವಾದ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ಈ ಚಿತ್ರಗಳು 2025ರ ನವೆಂಬರ್ ನಲ್ಲಿ ತ್ಯಾಗರಾಜ್ ಸ್ಟೇಡಿಯಂನಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯೊಂದರ ಚಿತ್ರಗಳಾಗಿವೆ ಎನ್ನುವುದನ್ನು ಪತ್ರಿಕಾ ಮಾಹಿತಿ ಸಂಸ್ಥೆ (PIB)ಯ ವಾಸ್ತವಾಂಶ ಪತ್ತೆ ಘಟಕವು ಪತ್ತೆಹಚ್ಚಿದೆ ಎಂದು ನ್ಯಾಯಾಲಯ ಹೇಳಿತು.

