ಸುಮಾರು 590 ಕೋಟಿ ರೂ. ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳದ (CBI) ಅಧಿಕಾರಿಗಳು ಅವರನ್ನು ಬಂಧಿಸಲು ಮುಂದಾದ ವೇಳೆ, ಅವರು ಕಳೆದ ಮೂರು ದಿನಗಳಿಂದ ತಮ್ಮ ನಿವಾಸದಲ್ಲಿ ಕಾಣಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
The Print ವರದಿಯ ಪ್ರಕಾರ, ಪರ್ದೀಪ್ ಕುಮಾರ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಸಿಬಿಐ ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿದಾಗ ಅವರು ಮನೆಯಲ್ಲಿ ಇರಲಿಲ್ಲ. ಅವರ ಕುಟುಂಬ ಸದಸ್ಯರು ಮತ್ತು ನಿವಾಸದಲ್ಲಿರುವ ಸಿಬ್ಬಂದಿಯಿಂದಲೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ತಿಳಿಸಲಾಗಿದೆ.
ಹರಿಯಾಣ ರಾಜ್ಯ ಸಾರಿಗೆ ಇಲಾಖೆಯಲ್ಲಿ ನಿರ್ದೇಶಕರಾಗಿಯೂ ವಿಶೇಷ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದ ಪರ್ದೀಪ್ ಕುಮಾರ್ ಅವರನ್ನು, ಹಗರಣದಲ್ಲಿ ಭಾಗಿಯಾಗಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ವರ್ಷದ ಎಪ್ರಿಲ್ 8ರಂದು ಅಮಾನತುಗೊಳಿಸಲಾಗಿತ್ತು.
ಈ ಹಗರಣವು ಹರಿಯಾಣ ಪಂಚಾಯತ್ ಇಲಾಖೆಯು ಫೆಬ್ರವರಿಯಲ್ಲಿ ತನ್ನ ಬ್ಯಾಂಕ್ ಖಾತೆಯನ್ನು ಮುಚ್ಚಿ, ಉಳಿದ ಹಣವನ್ನು ಮತ್ತೊಂದು ಬ್ಯಾಂಕ್ಗೆ ವರ್ಗಾಯಿಸಲು ಪ್ರಯತ್ನಿಸಿದಾಗ ಬಹಿರಂಗಗೊಂಡಿತ್ತು. ಇಲಾಖೆಯ ದಾಖಲೆಗಳಲ್ಲಿ ನಮೂದಾಗಿದ್ದ ಹಣದ ಮೊತ್ತ ಮತ್ತು ಬ್ಯಾಂಕ್ ಖಾತೆಯಲ್ಲಿ ವಾಸ್ತವವಾಗಿ ಲಭ್ಯವಿದ್ದ ಹಣದ ನಡುವೆ ಭಾರಿ ವ್ಯತ್ಯಾಸ ಕಂಡುಬಂದಿತ್ತು.
ಆರಂಭದಲ್ಲಿ ಹರಿಯಾಣ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು. ಆದರೆ ವಂಚನೆಯ ಪ್ರಮಾಣ ಮತ್ತು ಅದರ ವ್ಯಾಪ್ತಿಯನ್ನು ಪರಿಗಣಿಸಿ ನಂತರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು.
ಈವರೆಗೆ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿದ್ದು, ಹಲವಾರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಪರ್ದೀಪ್ ಕುಮಾರ್ ಹಿನ್ನೆಲೆ
ಪರ್ದೀಪ್ ಕುಮಾರ್ ಅವರು 2011ರ ಬ್ಯಾಚ್ನ ಹರಿಯಾಣ ನಾಗರಿಕ ಸೇವೆಯಿಂದ ಬಡ್ತಿ ಪಡೆದ ಐಎಎಸ್ ಅಧಿಕಾರಿ. ಅವರು ಇದೇ ಜೂನ್ 30ರಂದು ನಿವೃತ್ತಿಯಾಗಲಿದ್ದು, ನಿವೃತ್ತಿಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗಲೇ ಅವರ ವಿರುದ್ಧದ ತನಿಖೆ ತೀವ್ರಗೊಂಡಿದೆ.
ಸುಮಾರು ಎರಡೂವರೆ ದಶಕಗಳ ಆಡಳಿತಾತ್ಮಕ ಸೇವೆಯಲ್ಲಿ ಅವರು ಸಿರ್ಸಾ ಮತ್ತು ಫತೇಹಾಬಾದ್ ಜಿಲ್ಲೆಗಳ ಉಪ ಆಯುಕ್ತರಾಗಿ, ಪ್ರಾಥಮಿಕ ಶಿಕ್ಷಣ ನಿರ್ದೇಶಕರಾಗಿ, ಪರಿಸರ ನಿರ್ದೇಶಕರಾಗಿ ಹಾಗೂ ವಿವಿಧ ಇಲಾಖೆಗಳ ಉಪವಿಭಾಗೀಯ ಅಧಿಕಾರಿ ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ತನಿಖೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಹುದ್ದೆಯೆಂದರೆ, ಅವರು ಆಗಸ್ಟ್ 2022ರಿಂದ ಡಿಸೆಂಬರ್ 2025ರವರೆಗೆ ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವಧಿ.
ಚಂಡೀಗಢದ ಸೆಕ್ಟರ್-32ರಲ್ಲಿರುವ IDFC First Bank ಶಾಖೆಯಲ್ಲಿ ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಖಾತೆಯಿಂದ ಸುಮಾರು 169 ಕೋಟಿ ರೂ.ಗಳನ್ನು ಆರೋಪಿ ಬ್ಯಾಂಕ್ ಅಧಿಕಾರಿಗಳಿಗೆ ಸಂಬಂಧಿಸಿದ ಶೆಲ್ ಕಂಪೆನಿಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಪರ್ದೀಪ್ ಕುಮಾರ್ ಅವರ ಪಾತ್ರದ ತನಿಖೆಗಾಗಿ ಸಿಬಿಐ ಈಗಾಗಲೇ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17-ಎ ಅಡಿಯಲ್ಲಿ ಅನುಮತಿ ಪಡೆದುಕೊಂಡಿದೆ.
ಹಿರಿಯ ಐಎಎಸ್ ಅಧಿಕಾರಿಗಳೂ ತನಿಖೆಯ ವ್ಯಾಪ್ತಿಯಲ್ಲಿ
ಪ್ರಸ್ತುತ ಹರಿಯಾಣ ಮುದ್ರಣ ಮತ್ತು ಸ್ಟೇಷನರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ 1991ರ ಬ್ಯಾಚ್ನ ಐಎಎಸ್ ಅಧಿಕಾರಿ ವಿನೀತ್ ಗರ್ಗ್ ಅವರ ವಿರುದ್ಧವೂ ಸಿಬಿಐ ಸೆಕ್ಷನ್ 17-ಎ ಅಡಿಯಲ್ಲಿ ತನಿಖಾ ಅನುಮತಿ ಪಡೆದಿದೆ. ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ಹಣ ಠೇವಣಿ ಮಾಡಲಾಗಿದ್ದ ಸಂದರ್ಭದಲ್ಲಿ ಅವರು ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದರು.
ಈ ವಂಚನೆ ಹರಿಯಾಣದ ಎಂಟು ಸರ್ಕಾರಿ ಇಲಾಖೆಗಳು ಹಾಗೂ ಚಂಡೀಗಢ ಆಡಳಿತದ ಎರಡು ಸಂಸ್ಥೆಗಳಿಗೆ ಸಂಬಂಧಿಸಿದೆ. ಸಿಬಿಐ ಪ್ರಕಾರ, ಒಟ್ಟು ವಂಚನೆ ಮೊತ್ತ 657 ಕೋಟಿ ರೂ. ಆಗಿದ್ದರೆ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED) ಇದರ ಮೊತ್ತವನ್ನು 645 ಕೋಟಿ ರೂ. ಎಂದು ಅಂದಾಜಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಇಬ್ಬರು ಹರಿಯಾಣ ಐಎಎಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. 2012ರ ಬ್ಯಾಚ್ನ ಐಎಎಸ್ ಅಧಿಕಾರಿ ರಾಮ್ ಕುಮಾರ್ ಸಿಂಗ್ ಅವರನ್ನು ಪಂಚಕುಲ ಮಹಾನಗರ ಪಾಲಿಕೆ ಖಾತೆಯಿಂದ 79.46 ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 18ರಂದು ಬಂಧಿಸಲಾಗಿತ್ತು.
ಸ್ಥಿರ ಠೇವಣಿ (FD) ತೆರೆಯುವ ನೆಪದಲ್ಲಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಬಹುಸಹಿ ಚೆಕ್ಗಳನ್ನು ನೀಡಿದ್ದರು ಮತ್ತು ಯಾವುದೇ ಎಫ್ಡಿ ಖಾತೆಗಳನ್ನು ತೆರೆಯದೆ ಹಣವನ್ನು ಶೆಲ್ ಕಂಪೆನಿಗಳಿಗೆ ವರ್ಗಾಯಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.
ಜೂನ್ 22ರಂದು ಬಂಧಿಸಲ್ಪಟ್ಟ ಪಂಕಜ್ ಅಗರ್ವಾಲ್ ಅವರು ಶಾಲಾ ಶಿಕ್ಷಣ ಮತ್ತು ಕೃಷಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ, ಹಣಕಾಸು ಇಲಾಖೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹರಿಯಾಣ ಶಾಲಾ ಶಿಕ್ಷಾ ಪರಿಯೋಜನಾ ಪರಿಷತ್ ಹಾಗೂ ಹರಿಯಾಣ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ಖಾತೆಗಳನ್ನು ತೆರೆಯಲು ಅನುಮತಿ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಎರಡು ಇಲಾಖೆಗಳ ಒಟ್ಟು ನಷ್ಟ 60.54 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಚಂಡೀಗಢ ಆಡಳಿತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, AGMUT ಕೇಡರ್ನ ಹಿರಿಯ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ನವನೀತ್ ಕುಮಾರ್ ಶ್ರೀವಾಸ್ತವ ಅವರನ್ನು ಚಂಡೀಗಢ ನವೀಕರಿಸಬಹುದಾದ ಇಂಧನ ಮತ್ತು ವಿಜ್ಞಾನ-ತಂತ್ರಜ್ಞಾನ ಪ್ರಚಾರ ಸಂಸ್ಥೆ (CREST) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಎಂಟು ಐಎಎಸ್ ಅಧಿಕಾರಿಗಳ ವಿರುದ್ಧ ತನಿಖೆ
ಸಿಬಿಐ ತನಿಖೆಯ ವ್ಯಾಪ್ತಿಯಲ್ಲಿ ಒಟ್ಟು ಎಂಟು ಐಎಎಸ್ ಅಧಿಕಾರಿಗಳಿದ್ದಾರೆ. ಇವರಲ್ಲಿ ವಿನೀತ್ ಗರ್ಗ್ (1991 ಬ್ಯಾಚ್), ಪಂಕಜ್ ಅಗರ್ವಾಲ್ (2000 ಬ್ಯಾಚ್), ಮೊಹಮ್ಮದ್ ಶಾಯಿನ್ (2002 ಬ್ಯಾಚ್), ಸಾಕೇತ್ ಕುಮಾರ್ (2005 ಬ್ಯಾಚ್), ಡಿ.ಕೆ. ಬೆಹೆರಾ (2007 ಬ್ಯಾಚ್), ಮಣಿ ರಾಮ್ ಶರ್ಮಾ (2009 ಬ್ಯಾಚ್), ಪರ್ದೀಪ್ ಕುಮಾರ್ (2011 ಬ್ಯಾಚ್) ಮತ್ತು ರಾಮ್ ಕುಮಾರ್ ಸಿಂಗ್ (2012 ಬ್ಯಾಚ್) ಸೇರಿದ್ದಾರೆ.
ಇವರಲ್ಲಿ ಪಂಕಜ್ ಅಗರ್ವಾಲ್ ಮತ್ತು ರಾಮ್ ಕುಮಾರ್ ಸಿಂಗ್ ಬಂಧಿತರಾಗಿದ್ದರೆ, ಪರ್ದೀಪ್ ಕುಮಾರ್ ನಾಪತ್ತೆಯಾಗಿರುವುದು ತನಿಖಾ ಸಂಸ್ಥೆಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಹರಿಯಾಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಈಗಾಗಲೇ 17 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಇವರಲ್ಲಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮತ್ತು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಆರು ಅಧಿಕಾರಿಗಳು, ಮೂವರು ಸರ್ಕಾರಿ ನೌಕರರು, ಎರಡು ಕಂಪೆನಿಗಳು ಹಾಗೂ ಆರು ಖಾಸಗಿ ವ್ಯಕ್ತಿಗಳು ಸೇರಿದ್ದಾರೆ. ಆದರೆ ಐಎಎಸ್ ಅಧಿಕಾರಿಗಳ ವಿರುದ್ಧ ಇನ್ನೂ ಆರೋಪಪಟ್ಟಿ ಸಲ್ಲಿಸಲಾಗಿಲ್ಲ.

