ಇಂಫಾಲ: ಸಂಘರ್ಷಪೀಡಿತ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗಾಗಿ ವಿವಿಧ ಸಮುದಾಯಗಳೊಂದಿಗೆ ಮಾತುಕತೆಗಳು ಪ್ರಗತಿಯಲ್ಲಿದ್ದು, ಈ ಸಮಸ್ಯೆಯನ್ನು ಸಂವಾದದ ಮೂಲಕ ಮಾತ್ರ ಬಗೆಹರಿಸಲು ಸಾಧ್ಯ ಎಂದು ಮುಖ್ಯಮಂತ್ರಿ ವೈ. ಖೇಮ್ ಚಂದ್ ಸಿಂಗ್ ಶುಕ್ರವಾರ ಹೇಳಿದರು.
ಕುಕಿ ಮತ್ತು ನಾಗಾ ಸಮುದಾಯಗಳೇ ಪ್ರಮುಖವಾಗಿ ವಾಸಿಸುವ ತೆಂಗ್ನೌಪಾಲ್ ಜಿಲ್ಲೆಯ ಹೈಕಾಕ್ ಪೋಕ್ಪಿಯ ಮಿಷನ್ ಅಂಧ ವಿದ್ಯಾರ್ಥಿಗಳ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ರಾಜ್ಯದ ಎಲ್ಲ ಸಮುದಾಯಗಳಿಗೂ ಐಕ್ಯ ಮಣಿಪುರವೇ ಮುಂದಿನ ದಾರಿ. ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಯ ಕುರಿತು ಚರ್ಚಿಸಲು ವಿವಿಧ ಸಮುದಾಯಗಳ ಸಂಘಟನೆಗಳು ನನ್ನ ಅಧಿಕೃತ ನಿವಾಸಕ್ಕೆ ಭೇಟಿ ನೀಡುತ್ತಿವೆ. ಮೈತೇಯಿ, ಕುಕಿ ಹಾಗೂ ನಾಗಾ ಸಮುದಾಯಗಳು ತಮ್ಮ ಕುರಿತು ಮಾತ್ರ ಚಿಂತಿಸುವುದನ್ನು ಮುಂದುವರಿಸಿದರೆ ಹಾಗೂ ತಮ್ಮತಮ್ಮಲ್ಲೇ ಹೋರಾಡುವುದನ್ನು ಮುಂದುವರಿಸಿದರೆ, ರಾಜ್ಯ ಅಭಿವೃದ್ಧಿಯಾಗುವುದಿಲ್ಲ' ಎಂದು ಅವರು ಎಚ್ಚರಿಸಿದರು.
'ಬಹಳ ಹಿಂದಿನಿಂದಲೂ ರಾಜ್ಯದಲ್ಲಿದ್ದ 36 ಸಮುದಾಯಗಳು ಒಗ್ಗಟ್ಟಾಗಿ ಬರ್ಮನ್ನರು ಸೇರಿದಂತೆ ಇತರರನ್ನು ಎದುರಿಸಲು ಸಮರ್ಥವಾಗಿದ್ದವು. ರಾಜ್ಯದ ಹಾಲಿ ಗಡಿಯನ್ನು ಎಲ್ಲ ಸಮುದಾಯಗಳೂ ನಿರ್ಮಿಸಿ, ಅವುಗಳನ್ನು ರಕ್ಷಿಸುತ್ತಿವೆ. ನಮ್ಮ ಪೂರ್ವಜರು ಹಸ್ತಾಂತರಿಸಿರುವ ಈ ನೆಲವನ್ನು ನಾವೆಲ್ಲ ಪ್ರೀತಿಸಬೇಕು ಮತ್ತು ಗೌರವಿಸಬೇಕು' ಎಂದು ಅವರು ಹೇಳಿದರು.
ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ಕುರಿತು ವಿವಿಧ ಸಮುದಾಯಗಳೊಂದಿಗೆ ನಿರಂತರ ಸಂವಾದ ನಡೆಯುತ್ತಿದ್ದು, ಎಲ್ಲ ಸಮುದಾಯಗಳ ಸಹಕಾರದಿಂದ ಮಾತ್ರ ಶಾಶ್ವತ ಪರಿಹಾರ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವವರೆಲ್ಲ ಶಸ್ತ್ರಾಸ್ತ್ರ ತ್ಯಜಿಸದ ಹೊರತು ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ಅಸಾಧ್ಯ ಎಂದು ಅವರು ಇತ್ತೀಚೆಗೆ ಹೇಳಿದ್ದರು.



