ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ನಡುವೆ ಭಾರತೀಯ ನಾವಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಉ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಂದೇಶವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಶುಕ್ರವಾರ ಬೆಂಬಲಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ನಾವಿಕರ ಸಾವಿನ ವಿಷಯದ ಬಗ್ಗೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸುತ್ತಿರುವ ನಡುವೆಯೇ ತರೂರ್ ಅವರು ಮೋದಿ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.
ಸಂಘರ್ಷಗಳ ನಡುವೆ ನಾಗರಿಕ ನಾವಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ಅಮೆರಿಕ ಅಧ್ಯಕ್ಷರಿಗೆ ಭಾರತದ ಕಳವಳಗಳನ್ನು ತಿಳಿಸಿದ್ದಾರೆ ಎಂದು ತರೂರ್ ಹೇಳಿದರು .
"ಅಮೆರಿಕ ಅಧ್ಯಕ್ಷರೊಂದಿಗಿನ ಸಾರ್ವಜನಿಕ ಮತ್ತು ಖಾಸಗಿ ಸಭೆಗಳೆರಡರಲ್ಲೂ ಪ್ರಧಾನಿ ಮೋದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಯುದ್ಧದ ಸಮಯದಲ್ಲಿ, ವಾಣಿಜ್ಯ ಹಡಗುಗಳಲ್ಲಿರುವ ನಾಗರಿಕ ನಾವಿಕರು ಯುದ್ಧದ ಗುರಿಗಳಾಗಬಾರದು ಎಂಬ ಸಂದೇಶವನ್ನು ರವಾನಿಸುವುದು ಮುಖ್ಯವಾಗಿದೆ. ಅವರು ಸೈನಿಕರಲ್ಲ ಮತ್ತು ಪ್ರಧಾನಿ ಮೋದಿ ರವಾನಿಸಿದ ಸಂದೇಶವೂ ಇದೇ ಆಗಿದೆ" ಎಂದು ತರೂರ್ ತಿಳಿಸಿದರು.
ಒಮಾನ್ ಕೊಲ್ಲಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ, ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ವೇಳೆ ಪ್ರಧಾನಿ ಮೋದಿ ಮೌನವಾಗಿದ್ದರು ಎಂದು ಬುಧವಾರ ಕಾಂಗ್ರೆಸ್ ಪಕ್ಷವು ಪಿಎಂ ಮೋದಿ ಅವರನ್ನು ಗುರಿಯಾಗಿಸಿ ಆರೋಪಿಸಿತ್ತು. ಅಮೆರಿಕ ಸರ್ಕಾರದಿಂದ ಯಾವುದೇ ಕ್ಷಮೆಯಾಗಲಿ ಅಥವಾ ವಿಷಾದ ವ್ಯಕ್ತಪಡಿಸುವುದನ್ನಾಗಲಿ ಏಕೆ ಕೋರಲಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
ತರೂರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರಧಾನಿಯವರ ಕುರಿತು ಕಾಂಗ್ರೆಸ್ ನಾಯಕನ ಮುಕ್ತ ಪ್ರಶಂಸೆಯು ರಾಹುಲ್ ಗಾಂಧಿ ಅವರ ನಿಲುವನ್ನು ಬಹಿರಂಗಗೊಳಿಸಿದೆ ಎಂದು ಹೇಳಿದೆ.
"ಕಾಂಗ್ರೆಸ್ ನಾಯಕರೇ ಸ್ವತಃ ಪ್ರಧಾನಿಯ ಮೋದಿಯ ರಾಜತಾಂತ್ರಿಕತೆಯನ್ನು ಮುಕ್ತವಾಗಿ ಶ್ಲಾಘಿಸುತ್ತಿದ್ದಾರೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ವಿಷಯ ಬಂದಾಗ ಪ್ರಧಾನಿ ಮೋದಿ ಮೊದಲಿಗರಾಗಿ ನಿಲ್ಲುತ್ತಾರೆ. ಅದೇ ಭಾರತದ ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧ ಮಾತನಾಡುವ ವಿಷಯ ಬಂದಾಗ ರಾಹುಲ್ ಗಾಂಧಿ ಎಲ್ಲರಿಗಿಂತ ಮುಂದೆ ಇರುತ್ತಾರೆ," ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

